ಸಂವಿಧಾನ ದಿನಾಚರಣೆ ಮತ್ತು ವಿದ್ಯಾರ್ಥಿ ಸಂಘದ ಉದ್ಘಾಟನೆ : ಶ್ರೀ ದುರ್ಗಾಂಬಾ ಪದವಿಪೂರ್ವ ಕಾಲೇಜು ಆಲಂಕಾರು

ಸಂವಿಧಾನ ದಿನಾಚರಣೆ ಮತ್ತು ವಿದ್ಯಾರ್ಥಿ ಸಂಘದ ಉದ್ಘಾಟನೆ : ಶ್ರೀ ದುರ್ಗಾಂಬಾ ಪದವಿಪೂರ್ವ ಕಾಲೇಜು ಆಲಂಕಾರು

ನೇಸರ ನ 27: ಆಲಂಕಾರು ಶ್ರೀ ದುರ್ಗಾಂಬಾ ಪದವಿಪೂರ್ವ ಕಾಲೇಜಿನಲ್ಲಿ ಸಂವಿಧಾನ ದಿನಾಚರಣೆ ಮತ್ತು ವಿದ್ಯಾರ್ಥಿ ಸಂಘದ ಉದ್ಘಾಟನಾ ಕಾರ್ಯಕ್ರಮವು ನವೆಂಬರ್ 26 ರಂದು ಜರಗಿತು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಆಡಳಿತ ಮಂಡಳಿಯ ಅಧ್ಯಕ್ಷ ದಯಾನಂದ ರೈ ಮನವಳಿಕೆ ಅವರು ವಿದ್ಯಾ ಸಂಸ್ಥೆಗೆ ಹಿರಿಯ ವಿದ್ಯಾರ್ಥಿಯಾದ ದಯಾನಂದ.ಸಿ ಅವರು ಕೊಡುಗೆಯಾಗಿ ನೀಡಿದ ಪ್ರಾಜೆಕ್ಟರ್ ಅನ್ನು ಉದ್ಘಾಟಿಸಿ ಮಾತನಾಡಿ ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ನಾಯಕತ್ವದ ಮಹತ್ವ ಮತ್ತು ಸಾಂವಿಧಾನಿಕ ಮೌಲ್ಯಗಳ ಬಗ್ಗೆ ವಿದ್ಯಾರ್ಥಿಗಳಿಗೆ ಅರಿವು ಮೂಡಿಸಿದರು. ವಿದ್ಯಾರ್ಥಿ ಸಂಘದ ಉದ್ಘಾಟಕರಾಗಿ ಆಗಮಿಸಿದ ಕುಂತೂರು ಮಾರ್ ಇವಾನಿಯಸ್ ಶಿಕ್ಷಕ ಶಿಕ್ಷಣ ಮಹಾವಿದ್ಯಾಲಯದ ಪ್ರಾಂಶುಪಾಲರಾದ ಶ್ರೀಮತಿ ಉಷಾ.ಎಂ.ಎಲ್ ಅವರು ವಿದ್ಯಾರ್ಥಿ ಸಂಘವನ್ನು ಉದ್ಘಾಟಿಸಿ ಮಾತನಾಡಿ ಒಬ್ಬ ಉತ್ತಮ ನಾಯಕನಾಗಿ ಮೂಡಿಬರಬೇಕಾದರೆ ಮೊದಲು ನಾವು ನಮಗೆ ನಾಯಕರಾಗಬೇಕು. ನಮ್ಮಲ್ಲಿರುವ ನ್ಯೂನ್ಯತೆಗಳನ್ನು ನಾವು ತಿದ್ದಿಕೊಂಡು ನಮ್ಮ ಮನಸ್ಸನ್ನು ನಮ್ಮ ಹಿಡಿತದಲ್ಲಿ ಇಟ್ಟುಕೊಂಡು ಉತ್ತಮ ವ್ಯಕ್ತಿತ್ವವನ್ನು ರೂಪಿಸಿಕೊಂಡರೆ ಸಮಾಜ ನಮ್ಮನ್ನು ನಾಯಕನನ್ನಾಗಿ ಗುರುತಿಸುತ್ತದೆ ಎಂಬ ಕಿವಿಮಾತಿನೊಂದಿಗೆ ವಿದ್ಯಾರ್ಥಿ ಸಂಘಕ್ಕೆ ಶುಭಹಾರೈಸಿದರು.

ಪ್ರೌಢಶಾಲಾ ವಿಭಾಗದ ಮುಖ್ಯಗುರು ಶ್ರೀಪತಿ ರಾವ್ ವಿದ್ಯಾರ್ಥಿ ಸಂಘದ ಪದಾಧಿಕಾರಿಗಳಿಗೆ ಪ್ರಮಾಣವಚನ ಬೋಧಿಸಿದರು. ಸಂವಿಧಾನ ದಿನಾಚರಣೆ ಅಂಗವಾಗಿ ಎಲ್ಲಾ ವಿದ್ಯಾರ್ಥಿಗಳಿಗೆ ದ್ವಿತೀಯ ಕಲಾ ವಿಭಾಗದ ವಿದ್ಯಾರ್ಥಿನಿ ಪೂಜಶ್ರೀ ಅವರು ಸಂವಿಧಾನದ ಪೂರ್ವ ಪೀಠಿಕೆಯನ್ನು ಬೋಧಿಸಿದರು.

ಈ ಕಾರ್ಯಕ್ರಮದಲ್ಲಿ ಆಡಳಿತ ಮಂಡಳಿಯ ಸದಸ್ಯ ರಾಮರಾಜ ನಗ್ರಿ, ಶಿಕ್ಷಕ ರಕ್ಷಕ ಸಂಘದ ಅಧ್ಯಕ್ಷ ರಾಜಗೋಪಾಲ್ ಭಟ್, ಶಿಕ್ಷಕ ರಕ್ಷಕ ಸಂಘದ ಸದಸ್ಯರು, ಬೋಧಕ ಬೋಧಕೇತರ ವೃಂದದವರು ಉಪಸ್ಥಿತರಿದ್ದರು. ಪ್ರೌಢಶಾಲಾ ವಿಭಾಗದ ವಿದ್ಯಾರ್ಥಿನಿಯರಾದ ಕಾವ್ಯ ಕೆ, ಅನಘಲಕ್ಷ್ಮಿ, ಚಿನ್ಮಯಿ, ಆರ್.ಹನಿ ಅವರು ಪ್ರಾರ್ಥಿಸಿದರು. ಪ್ರಾಂಶುಪಾಲ ನವೀನ್ ರೈ ಸ್ವಾಗತಿಸಿ ಸಮಾಜಶಾಸ್ತ್ರ ಉಪನ್ಯಾಸಕಿ ಶ್ರೀಮತಿ ಆಶಾ.ಡಿ.ಜಿ ವಂದಿಸಿದರು. ಕನ್ನಡ ಉಪನ್ಯಾಸಕಿ ಶ್ರೀಮತಿ ರೂಪ.ಎಂ.ಟಿ ನಿರೂಪಿಸಿದರು.

2 comments

comments user
Naveen Rai

ಉತ್ತಮ ರೀತಿಯಲ್ಲಿ ವರದಿ ಮಾಡಿರುವುದಕ್ಕೆ ಅಭಿನಂದನೆಗಳು 🙏

    comments user
    ನೇಸರ ಡೆಸ್ಕ್

    Thank U Sir

Leave a Reply

You May Have Missed

error: Content is protected !!