ರಾಜ್ಯದಲ್ಲಿ ಸೆ.30ರಿಂದ ಭಾರತ್ ಜೋಡೋ; ದ.ಕ ಜಿಲ್ಲೆಯಿಂದ ಗುಂಡ್ಲುಪೇಟೆಗೆ ಹತ್ತು ಸಾವಿರ ಜನ – ಟಿ.ಎಂ.ಶಹೀದ್

ಕಡಬ: ನವಭಾರತ ನಿರ್ಮಾಣ ಧ್ಯೇಯ ಉದ್ದೇಶಗಳನ್ನಿಟ್ಟುಕೊಂಡು ಕಾಂಗ್ರೆಸ್ ಮುಖಂಡ ರಾಹುಲ್ ಗಾಂಧಿ ಅವರು ನಡೆಸುತ್ತಿರುವ ಭಾರತ್ ಜೋಡೋ ಕಾರ್ಯಕ್ರಮಕ್ಕೆ ಅಭೂತಪೂರ್ವ ಬೆಂಬಲ ವ್ಯಕ್ತವಾಗುತ್ತಿದ್ದು, ರಾಜ್ಯ ಹಾಗೂ ಕೇಂದ್ರ ಸರಕಾರದ ವಿರುದ್ಧ ಜನ ತಿರುಗಿ ಬಿದ್ದಿದ್ದಾರೆ ಎನ್ನುವುದು ಸ್ಪಷ್ಟವಾಗುತ್ತಿದೆ ಎಂದು ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿಯ ಸದಸ್ಯ ಭಾರತ್ ಜೋಡೋ ಕಾರ್ಯಕ್ರಮದ ಸಂಯೋಜಕ ಟಿ.ಎಂ.ಶಹೀದ್ ಹೇಳಿದರು.
ಅವರು ಶನಿವಾರ ಕಡಬ ಕಾಂಗ್ರೆಸ್ ಕಛೇರಿಯಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ ಭಾರತ್ ಜೋಡೋ ಕಾರ್ಯಕ್ರಮ ಯಶಸ್ವಿಯಾಗುವುದನ್ನು ಕಂಡು ಬಿಜೆಪಿಯವರಿಗೆ ನಡುಕ ಶುರುವಾಗಿದ್ದು ಕಾರ್ಯಕ್ರಮ ವಿರುದ್ಧ ಇಲ್ಲ ಸಲ್ಲದ ಆರೋಪ ಮಾಡುತ್ತಿದ್ದಾರೆ ಎಂದರು. ಪ್ರಪಂಚದಲ್ಲೇ ಈವರೆಗೆ ನಡೆಯದಂತ ಬೃಹತ್ ಐತಿಹಾಸಿಕ ಪಾದಯಾತ್ರೆ ಭಾರತ್ ಜೋಡೋ ಕಾರ್ಯಕ್ರಮದಲ್ಲಿ ನಡೆಯುತ್ತಿದೆ. ಕನ್ಯಾಕುಮಾರಿಯಿಂದ ಕಾಶ್ಮೀರದವರೆಗೆ 3500 ಕಿಲೋ ಮೀಟರ್ ಪಾದಯಾತ್ರೆ ಮಾಡಲಾಗುತ್ತಿದೆ ಎಂದರು.
ಈಗಾಗಲೇ ಕನ್ಯಾಕುಮಾರಿಯಿಂದ ಕೊಚ್ಚಿನ್ ತನಕ 350 ಕಿಲೋ ಮೀಟರ್ ನಡಿಗೆ ನಡೆದು ಸಾಗಿದ್ದಾರೆ. ಬಿಜೆಪಿಯವರ ಅಪಪ್ರಚಾರದ ನಡುವೆಯೂ ಜಾಥಾಕ್ಕೆ ಎಲ್ಲಾ ಕಡೆಯಿಂದ ಜನಸಾಗರ ಹರಿದು ಬರುತ್ತಿದೆ. ರಾಜ್ಯ ಹಾಗೂ ಕೇಂದ್ರದ ಜನವಿರೋಧಿ ನೀತಿಯನ್ನು ಜನರಿಗೆ ತಿಳಿಸಿ, ಜನಾಕ್ರೋಶವನ್ನು ಸಂಗ್ರಹ ಮಾಡಿ, ಭಾರತದಲ್ಲಿ ಕಳೆದ ಎಂಟು ವರ್ಷಗಳಿಂದ ಛಿದ್ರವಾಗಿರುವ ಸಮುದಾಯವನ್ನು ಒಗ್ಗೂಡಿಸಿ ಜಾತ್ಯಾತೀತ ನೆಲೆಯಲ್ಲಿ ರಾಷ್ಟ್ರ ಕಟ್ಟುವ ಉದ್ದೇಶವನ್ನು ಕಾರ್ಯಕ್ರಮದಲ್ಲಿ ಅನುಷ್ಠಾನ ಮಾಡಲಾಗುತ್ತಿದೆ. ಭಾರತ್ ಜೋಡೋ ಜಾಥಾ ಸೆ.29ರಂದು ರಾತ್ರಿ ಚಾಮರಾಜ ಪೇಟೆಯಿಂದ ಕರ್ನಾಟಕಕ್ಕೆ ಪ್ರವೇಶ ಪಡೆಯುತ್ತಿದ್ದು, ಸೆ.30ರಂದು ಗುಂಡ್ಲು ಪೇಟೆಯಿಂದ ಆರಂಭವಾಗುವ ಪಾದಯಾತ್ರೆ ಜಾಥಾದಲ್ಲಿ ದ.ಕ ಜಿಲ್ಲೆಯಿಂದ ಹತ್ತರಿಂದ ಇಪ್ಪತ್ತು ಸಾವಿರ ಜನ ಭಾಗವಹಿಸುತ್ತಿದ್ದಾರೆ.
ಕಡಬ ಬ್ಲಾಕ್ ನಿಂದಲೇ 2000 ಜನ ಭಾಗವಹಿಸುವ ನಿರೀಕ್ಷೆಯಿದ್ದು, ಈಗಾಗಲೇ 20 ಬಸ್ಸುಗಳನ್ನು ಬುಕ್ ಮಾಡಲಾಗಿದೆ, ರಾಹುಲ್ ಗಾಂಧಿಯವರೊಂದಿಗೆ ನಮ್ಮ ಜಿಲ್ಲೆಯವರಿಗೆ ಹೆಜ್ಜೆ ಹಾಕುವ ಅವಕಾಶ ಕಲ್ಪಿಸಲಾಗಿದೆ. ಜಾತ್ಯಾತೀತ ವ್ಯವಸ್ಥೆಯಲ್ಲಿ ನಂಬಿಕೆಯಿರುವ ಎಲ್ಲಾ ಸಮುದಾಯದ ಜನ ಪಕ್ಷಾತೀತವಾಗಿ ಭಾಗವಹಿಸಬಹುದು ಎಂದು ಹೇಳಿದ ಟಿ.ಎಂ.ಶಹೀದ್, ಕಳೆದ ಎಂಟು ವರ್ಷಗಳಿಂದ ನಮ್ಮನ್ನಾಳಿದ ಬಿಜೆಪಿ ನೇತೃತ್ವದ ನರೇಂದ್ರ ಮೋದಿ ಸರಕಾರ ಎಲ್ಲಾ ಕ್ಷೇತ್ರದಲ್ಲಿ ವಿಫಲವಾಗಿದ್ದು, ಅಗತ್ಯ ವಸ್ತುಗಳ ಬೆಲೆಯೇರಿಕೆಯಿಂದ ಜನ ತತ್ತರಿಸಿದ್ದಾರೆ. ಮುಂದಿನ ಚುನಾವಣೆಯಲ್ಲಿ ಜಿಲ್ಲೆಯ ಎಲ್ಲಾ ಕ್ಷೇತ್ರಗಳಲ್ಲಿ ಕಾಂಗ್ರೇಸ್ ಗೆದ್ದು ರಾಜ್ಯದಲ್ಲಿ 130 ಸ್ಥಾನಗಳೊಂದಿಗೆ ಅಧಿಕಾರದ ಚುಕ್ಕಾಣಿ ಹಿಡಿದು ಉತ್ತಮ ಆಡಳಿತ ನೀಡಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಪತ್ರಿಕಾಗೋಷ್ಟಿಯಲ್ಲಿ ಕೆ.ಪಿ.ಸಿ.ಸಿ ಅಲ್ಪ ಸಂಖ್ಯಾತ ಘಟಕದ ಕಾರ್ಯದರ್ಶಿ ಅಬೂಸಲಿ ಗೂನಡ್ಕ, ಕಾಂಗ್ರೆಸ್ ಮುಖಂಡರಾದ ಸೈಮನ್ ಸಿ.ಜೆ, ಸತೀಶ್ ನಾಯಕ್ ಮೇಲಿನಮನೆ, ಅಶ್ರಫ್ ಶೇಡಿಗುಂಡಿ, ಕೆ.ಎಂ.ಹನೀಫ್, ಜೆ.ಪಿ.ಎಂ.ಚೆರಿಯನ್, ಶರೀಫ್ ಎ.ಎಸ್, ಸತೀಶ್ ಶೆಟ್ಟಿ ಬೀರುಕ್ಕು, ಫೈಝಲ್ ಎಸ್.ಇ.ಎಸ್, ಶರೀಫ್ ಕಂಠಿ, ಅವಿನಾಶ್, ಸಿದ್ದಿಕ್ ಕೊಕ್ಕೋ, ಡೆನ್ನೀಸ್ ಫೆರ್ನಾಂಡೀಸ್, ಟಿ.ಎಂ.ಮ್ಯಾಥ್ಯೂ, ಎಸ್.ಅಬ್ಬಾಸ್, ಕೆ.ಎಚ್.ಇಸ್ಮಾಯಿಲ್ ಮತ್ತಿತರರು ಉಪಸ್ಥಿತರಿದ್ದರು.



















Leave a Reply