“ಸುಗ್ಗಿ ನೇಜಿ ಸಂಭ್ರಮ- 2021” ಕೊಕ್ಕಡ ಶ್ರೀ ವೈದ್ಯನಾಥೇಶ್ವರ ವಿಷ್ಣುಮೂರ್ತಿ ದೇವರ ಪೂಕರೆ ಗದ್ದೆಯಲ್ಲಿ

ನೇಸರ ಡಿ17: ಬೆಳ್ತಂಗಡಿ ತಾಲೂಕಿನ ಕೊಕ್ಕಡ ಶ್ರೀ ವೈದ್ಯನಾಥೇಶ್ವರ ವಿಷ್ಣುಮೂರ್ತಿ ದೇವರ ಪಾವಿತ್ರ್ಯತೆಯ ಇತಿಹಾಸ ಪ್ರಸಿದ್ಧ ಕೋರಿ ಜಾತ್ರೆ ನಡೆಯುವ ಪೂಕರೆ ಗದ್ದೆಯಲ್ಲಿ ಇದೇ ಡಿಸೆಂಬರ್ 19 ರವಿವಾರ ವಿವಿಧ ಸಂಘಟನೆಗಳ ಹಾಗೂ ವಿವಿಧ ಕಾಲೇಜುಗಳ ಎನ್ ಎಸ್ ಎಸ್ ಘಟಕಗಳ ಸಹಭಾಗಿತ್ವದಲ್ಲಿ “ಸುಗ್ಗಿ ನೇಜಿ ಸಂಭ್ರಮ- 2021” ನಡೆಯಲಿದೆ.
ಈ ಕಾರ್ಯಕ್ರಮದಲ್ಲಿ ತಾಲೂಕಿನ 50 ಕ್ಕಿಂತಲೂ ಅಧಿಕ ಸಂಘಟನೆಗಳು ಸದಸ್ಯರು, ರೈತರು, ಧಾರ್ಮಿಕ ಮುಖಂಡರು, ಕ್ಷೇತ್ರದ ಭಕ್ತರು, ಜನಪ್ರತಿನಿಧಿಗಳು ಮತ್ತು ವಿವಿಧ ಕಾಲೇಜುಗಳ ಎನ್ಎಸ್ಎಸ್ ಘಟಕಗಳ ವಿದ್ಯಾರ್ಥಿಗಳು ಭಾಗವಹಿಸಿ ನೇಜಿ ನಾಟಿಯನ್ನು ನಡೆಸಿಕೊಡಲಿದ್ದಾರೆ.

ಬೆಳಗ್ಗೆ 9.30ಕ್ಕೆ ಶ್ರೀ ವೈದ್ಯನಾಥೇಶ್ವರ ದೇವಳದಿಂದ ಬೃಹತ್ ಮೆರವಣಿಗೆಯಲ್ಲಿ ಗದ್ದೆಗೆ ತೆರಳಿ,ಬಳಿಕ ನೇಜಿ ನಾಟಿ ಕಾರ್ಯಕ್ರಮಕ್ಕೆ ಶ್ರೀ ಸೌತಡ್ಕ ಮಹಾಗಣಪತಿ ದೇವಸ್ಥಾನದ ವ್ಯವಸ್ಥಾಪನ ಸಮಿತಿಯ ಅಧ್ಯಕ್ಷ ಹರೀಶ್ ರಾವ್ ಮುಂಡ್ರುಪಾಡಿ ಗದ್ದೆಯಲ್ಲಿ ನೇಜಿ ನಾಟಿ ಮಾಡುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಲಿದ್ದಾರೆ.ಕೊಕ್ಕಡ ಶ್ರೀ ವೈದ್ಯನಾಥೇಶ್ವರ ದೇವಸ್ಥಾನದ ಪವಿತ್ರಪಾಣಿ ರಾಧಾಕೃಷ್ಣ ಯಡಪಡಿತ್ತಾಯ,ಕೊಕ್ಕಡ ಶ್ರೀ ವೈದ್ಯನಾಥೇಶ್ವರ ದೇವಸ್ಥಾನದ ವ್ಯವಸ್ಥಾಪನಾ ಸಮಿತಿಯ ಅಧ್ಯಕ್ಷ ಬಾಲಕೃಷ್ಣ ಕೆದಿಲಾಯ ಮತ್ತು ಸಮಿತಿ ಸದಸ್ಯರು, ವಿವಿಧ ಸಂಘಟನೆಗಳ ಪದಾಧಿಕಾರಿಗಳು,ವಿದ್ಯಾರ್ಥಿಗಳು ಮತ್ತು ಕಾರ್ಯಕರ್ತರು ಉಪಸ್ಥಿತರಿರುವರು. ಎಂದು ಈ ಕಾರ್ಯಕ್ರಮದ ವ್ಯವಸ್ಥಾಪಕರಾದ ಶ್ರೀಧರ ರಾವ್ ಮೇದಿನಿ ಫಾರ್ಮ್ ಕಳಂಜ ತಿಳಿಸಿದರು.














Leave a Reply