ಧಾರ್ಮಿಕ ಕ್ಷೇತ್ರಗಳು ಯಕ್ಷಗಾನದ ಕಲಾವಿದರನ್ನು, ಯಕ್ಷಗಾನವನ್ನು ಪ್ರೋತ್ಸಾಹಿಸಬೇಕು – ಹರೀಶ್ ರಾವ್ ಮುಂಡ್ರುಪ್ಪಾಡಿ

ಧಾರ್ಮಿಕ ಕ್ಷೇತ್ರಗಳು ಯಕ್ಷಗಾನದ ಕಲಾವಿದರನ್ನು, ಯಕ್ಷಗಾನವನ್ನು ಪ್ರೋತ್ಸಾಹಿಸಬೇಕು – ಹರೀಶ್ ರಾವ್ ಮುಂಡ್ರುಪ್ಪಾಡಿ

ಕೊಕ್ಕಡ: ಸೌತಡ್ಕ ಶ್ರೀ ಮಹಾಗಣಪತಿ ಯಕ್ಷಗಾನ ತರಬೇತಿ ಕೇಂದ್ರ ಕೊಕ್ಕಡ ಹಾಗೂ ಶಬರಾಯ ಪ್ರತಿಷ್ಠಾನ ಕೊಕ್ಕಡ ಇದರ ಸಹಯೋಗದೊಂದಿಗೆ ಜ.29 ರಂದು ಕೊಕ್ಕಡದ ಹುರುಳಿಮಜಲು ವಠಾರದಲ್ಲಿ ವಾರ್ಷಿಕೋತ್ಸವ- 2023 ಕಾರ್ಯಕ್ರಮ ನಡೆಯಿತು.

ಸಭಾ ಕಾರ್ಯಕ್ರಮವನ್ನು ದೀಪ ಪ್ರಜ್ವಲಿಸುವ ಮೂಲಕ ಶ್ರೀ ಕ್ಷೇತ್ರ ಸೌತಡ್ಕ ವ್ಯವಸ್ಥಾಪನಾ ಸಮಿತಿಯ ಅಧ್ಯಕ್ಷರಾದ ಹರೀಶ್ ರಾವ್ ಮುಂಡ್ರುಪ್ಪಾಡಿ ಉದ್ಘಾಟಿಸಿ ಮಾತನಾಡಿದ ಅವರು ಯಕ್ಷಗಾನ ಕಲೆಯು ಆರಾಧಿಸುವ ಕಲೆಯಾಗಿದ್ದು, ಹಿಂದಿನ ದಿನಗಳಲ್ಲಿ ಯಕ್ಷಗಾನವು ರಾತ್ರಿ ನಡೆಯುವ ಶಾಲೆಯಾಗಿತ್ತು. ಕರೋನ ದಿನಗಳಲ್ಲಿ ಯಕ್ಷ ಕಲಾವಿದರು ಅಪಾರ ಕಷ್ಟವನ್ನು ಅನುಭವಿಸಿದ್ದಾರೆ. ಯಕ್ಷಗಾನ ಕಲೆ ಉಳಿಯುವಲ್ಲಿ ಯಕ್ಷಗಾನ ಕಲಾವಿದರು ಪ್ರಯತ್ನಿಸಿದ್ದಾರೆ. ಯಕ್ಷಗಾನ ಕಲೆಯು ಬೆಳೆಯುವ ಉದ್ದೇಶದಿಂದ ಯಕ್ಷ ಭಾರತಿ ಸಂಸ್ಥೆಯು ಯಕ್ಷಗಾನಕ್ಕೆ ಸಂಬಂಧಿಸಿದಂತಹ ಗ್ರಂಥಗಳನ್ನು ಸಂಗ್ರಹಿಸುತ್ತಿದ್ದಾರೆ. ಧಾರ್ಮಿಕ ಕ್ಷೇತ್ರಗಳು ಯಕ್ಷಗಾನದ ಕಲಾವಿದರನ್ನು, ಯಕ್ಷಗಾನವನ್ನು ಪ್ರೋತ್ಸಾಹಿಸಬೇಕು. ಕರಾವಳಿಯ ಅದ್ಭುತ ಕಲೆ ಯಕ್ಷಗಾನದಲ್ಲಿ ಭಾಷೆಗೂ ಮಹತ್ವ ನೀಡಿರುತ್ತಾರೆ. ಯಕ್ಷಗಾನ ಅಕಾಡೆಮಿ ಯಕ್ಷ ಕಲಾವಿದರಿಗೆ ಪ್ರೋತ್ಸಾಹಿಸಬೇಕು ಎಂದು ಕರೆ ನೀಡಿದರು.

ಕಾರ್ಯಕ್ರಮದ ಅಭ್ಯಾಗತರಾದ ಕೊಕ್ಕಡ ಗ್ರಾಮ ಪಂಚಾಯತ್ ನ ಅಧ್ಯಕ್ಷರಾದ ಯೋಗೀಶ್ ಆಲಂಬಿಲ ಮಾತನಾಡಿ ನಾನು ಯಕ್ಷಗಾನ ಕಲಾವಿದನಾಗಿ, ಪ್ರೇಮಿಯಾಗಿದ್ದು. ಯಕ್ಷಗಾನವನ್ನು ಬೆಳೆಸುವ ಕೆಲಸ ನಮ್ಮಿಂದಾಗ ಬೇಕೆಂದರು, ಈ ನಾಟ್ಯ ಕಲಾ ಕೇಂದ್ರದಲ್ಲಿ ಕಲಿತ ವಿದ್ಯಾರ್ಥಿಗಳು ಯಕ್ಷಗಾನ ಕಲೆಯನ್ನು ಮೈಗೂಡಿಸಿಕೊಂಡು, ಕಲೆಯು ಇನ್ನಷ್ಟು ಹೆಚ್ಚು ಬೆಳೆಸಬೇಕೆಂದರು.

ಕರ್ನಾಟಕ ಯಕ್ಷಗಾನ ಅಕಾಡೆಮಿ ಸದಸ್ಯರಾದ ಶ್ರೀಮತಿ ಆರತಿ ಭಟ್ ಸಂದರ್ಭೋಚಿತವಾಗಿ ಮಾತನಾಡಿ, ಕರ್ನಾಟಕ ಯಕ್ಷಗಾನ ಅಕಾಡೆಮಿಯ ಬಗ್ಗೆ ತಿಳಿಸಿದರು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ ಶ್ರೀನಿವಾಸ ಔಷಧಿಯ ಮಹಾ ವಿಶ್ವವಿದ್ಯಾಲಯ ಮಂಗಳೂರು ಪ್ರಾಂಶುಪಾಲರು ಹಾಗೂ ನಿರ್ದೇಶಕರಾದ ಡಾ.ರಾಮಕೃಷ್ಣ ಶಬರಾಯ ಮಾತನಾಡಿ ಶಬರಾಯ ಪ್ರತಿಷ್ಠಾನೆಯು ಕಲೆಗೆ ಸದಾ ಪ್ರೋತ್ಸಾಹವನ್ನು ನೀಡುತ್ತಾ ಬರುತ್ತಿದೆ. ವಿದ್ಯಾರ್ಥಿಗಳಲ್ಲಿ ಗುರು ಪ್ರೀತಿ, ಗುರು ಭಕ್ತಿ ಇರಬೇಕು. ಯಕ್ಷಗಾನ ಕಲೆಯು ನಮ್ಮ ಜ್ಞಾನ ಸಂಪಾದನೆಗೆ ಸಹಾಯವಾಗುತ್ತದೆ. ಯಕ್ಷಗಾನ ಕಲಾವಿದರನ್ನು ಪ್ರತಿಯೊಬ್ಬರು ಗೌರವಿಸುತ್ತಾರೆ. ನಾವೆಲ್ಲರೂ ಯಕ್ಷಗಾನ ಕಲೆ ಉಳಿಯುವಲ್ಲಿ ಎಲ್ಲರೂ ಸಹಕರಿಸೋಣ ಎಂದರು.

ಸನ್ಮಾನ
ಕೊಕ್ಕಡದ ಹಿರಿಯ ಯಕ್ಷಗಾನ ಭಾಗವತರಾದ ವೆಂಕಟೇಶ ಬಾಳ್ತಿಲಾಯ ಮತ್ತು ವೆಂಕಟೇಶ ಆಚಾರ್ಯ ಇವರನ್ನು ವೇದಿಕೆಯಲ್ಲಿ ಸನ್ಮಾನಿಸಲಾಯಿತು.
ಕಲಾ ಕೇಂದ್ರದ ಶಿಷ್ಯ ವೃಂದ ಹಾಗೂ ಪೋಷಕರು ಕಲಾ ಕೇಂದ್ರದ ಗುರುಗಳಾದ ಎನ್ ವಿಠಲ ಹೆಬ್ಬಾರ್ ರನ್ನು ಸನ್ಮಾನಿಸಿದರು.

ಡಾ.ಗಣೇಶ್ ಪ್ರಸಾದ್ ಅಂಬಿಕಾ ಕ್ಲಿನಿಕ್ ಸ್ವಾಗತಿಸಿದರು, ಕೊಕ್ಕಡ ಸೇವಾ ಸಹಕಾರಿ ಬ್ಯಾಂಕಿನ ನಿವೃತ್ತ ಕಾರ್ಯನಿರ್ವಹಣಾಧಿಕಾರಿ ಶ್ರೀಮತಿ ಭುವನೇಶ್ವರಿ ಸನ್ಮಾನಿತರ ಪರಿಚಯವನ್ನು ವಾಚಿಸಿದರು, ಡಾ.ತಾರಾ ವಂದಿಸಿದರು. ಶ್ರೀಮತಿ ಸ್ವಾತಿ ಬಾಳ್ತಿಲಾಯ ನಿರೂಪಿಸಿದರು.
ಸಭಾ ಕಾರ್ಯಕ್ರಮದ ಬಳಿಕ ಕಲಾ ಕೇಂದ್ರದ ವಿದ್ಯಾರ್ಥಿಗಳಿಂದ ಶ್ರೀದೇವಿ ಮಹಾತ್ಮೆ ಯಕ್ಷಗಾನ ಬಯಲಾಟ ನಡೆಯಿತು.

Leave a Reply

You May Have Missed

error: Content is protected !!