Hit & Run case; ಗಾಯಾಳು ಬೈಕ್ ಸವಾರ ಚಿಕಿತ್ಸೆ ಫಲಕಾರಿಯಾಗದೆ ಮೃತ್ಯು

Hit & Run case; ಗಾಯಾಳು ಬೈಕ್ ಸವಾರ ಚಿಕಿತ್ಸೆ ಫಲಕಾರಿಯಾಗದೆ ಮೃತ್ಯು

ಉಳ್ಳಾಲ : ಬೈಕ್‍ಗೆ ಇನೋವಾ ಕಾರು ಢಿಕ್ಕಿ ಹೊಡೆದು ಪರಾರಿಯಾಗಿದ್ದ ಘಟನೆಯಲ್ಲಿ ಗಂಭೀರ ಗಾಯಗೊಂಡಿದ್ದ ಕೋಟೆಕಾರು ಪಟ್ಟಣ ವ್ಯಾಪ್ತಿಯ ಮಾಡೂರು ವೈದ್ಯನಾಥ ದೈವಸ್ಥಾನ ರಸ್ತೆ ನಿವಾಸಿ ತೇಜಸ್ ಕುಲಾಲ್(28) ಚಿಕಿತ್ಸೆ ಫಲಕಾರಿಯಾಗದೆ ಮಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ಸಾವನ್ನಪ್ಪಿದ್ದಾರೆ.

ಕಳೆದ ಜೂ.4 ರ ಭಾನುವಾರ ತಡರಾತ್ರಿ ತೇಜಸ್ ಸಂಕೋಳಿಗೆಯ ಪೆಟ್ರೋಲ್ ಬಂಕಿಗೆ ಪೆಟ್ರೋಲ್ ತುಂಬಿಸಲು ಬೈಕಲ್ಲಿ ತೆರಳುತ್ತಿದ್ದ ವೇಳೆ ಕೇರಳ ನೋಂದಾವಣಿಯ ಇನ್ನೋವಾ ಕಾರೊಂದು ಢಿಕ್ಕಿ ಹೊಡೆದು ಪರಾರಿಯಾಗಿತ್ತು. ಹಿಟ್ ಆಂಡ್ ರನ್ ಪ್ರಕರಣ ದಾಖಲಿಸಿದ ಮಂಗಳೂರು ದಕ್ಷಿಣ ಸಂಚಾರಿ ಪೊಲೀಸರು ತಲಪಾಡಿ ಟೋಲ್ ಗೇಟ್ ನ ಸಿಸಿಟಿವಿ ದೃಶ್ಯಾವಳಿ ಆಧಾರದಲ್ಲಿ ಮರುದಿನವೇ ಘಟನೆಗೆ ಕಾರಣವಾದ ಕಾರನ್ನು ವಶಕ್ಕೆ ಪಡೆದುಕೊಂಡಿದ್ದರು.

ಗಂಭೀರ ಗಾಯಗೊಂಡಿದ್ದ ತೇಜಸ್ ನನ್ನು ತಕ್ಷಣಕ್ಕೆ ದೇರಳಕಟ್ಟೆ ಖಾಸಗಿ ಆಸ್ಪತ್ರೆಗೆ ಸಾಗಿಸಿದ್ದು, ನಂತರ ಮಂಗಳೂರಿನ ಕೆಎಮ್ ಸಿ ಆಸ್ಪತ್ರೆಗೆ ಹೆಚ್ಚಿನ ಚಿಕಿತ್ಸೆಗಾಗಿ ದಾಖಲಿಸಲಾಗಿತ್ತು. ತಲೆಗೆ ಗಂಭೀರ ಗಾಯವಾಗಿದ್ದ ತೇಜಸ್ ಕೋಮಾ ಸ್ಥಿತಿಯಲ್ಲಿದ್ದು ಇಂದು ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾರೆ.

ಮೃತ ತೇಜಸ್ ಅವಿವಾಹಿತರಾಗಿದ್ದು ಸುಝಕಿ ಕಂಪನಿಯಲ್ಲಿ ಮೆಕ್ಯಾನಿಕ್ ಆಗಿದ್ದರು. ಮೃತರು ತಂದೆ ರಾಮ ಕುಲಾಲ್, ತಾಯಿ ರೇವತಿ ಮತ್ತು ಸಹೋದರ ರವೀಂದ್ರ ಅವರನ್ನು ಅಗಲಿದ್ದಾರೆ.

Leave a Reply

You May Have Missed

error: Content is protected !!