ಕಾಂತುಕೋಡಿ ಮುಳುಗು ಸೇತುವೆಯಲ್ಲಿ ಸಿಲುಕಿಕೊಂಡ ಪಿಕಪ್ ವಾಹನ

ಕಾಂತುಕೋಡಿ ಮುಳುಗು ಸೇತುವೆಯಲ್ಲಿ ಸಿಲುಕಿಕೊಂಡ ಪಿಕಪ್ ವಾಹನ

ಬಂಟ್ವಾಳ: ಕೆದಿಲ ಗ್ರಾಮದ ಕಾಂತುಕೋಡಿಯ ಮುಳುಗು ಸೇತುವೆಯೊಂದರಲ್ಲಿ ಪಿಕಪ್ ವಾಹನವೊಂದು ಸಿಲುಕಿ ಹಾಕಿಕೊಂಡಿರುವ ಘಟನೆ ರವಿವಾರ ನಡೆದಿದೆ.
ಕೆದಿಲ ಬೀಟಿಗೆ ಹಾಲಿನ ಸೊಸೈಟಿ ಮೂಲಕ ಕಾಂತುಕೋಡಿ ಆಗಿ ಪಡೀಲಿಗೆ ಸಂಪರ್ಕ ಮಾಡುವ ರಸ್ತೆಯ ಕಾಂತುಕೋಡಿ ಎಂಬಲ್ಲಿನ ಸೇತುವೆಯೊಂದು ಕಳೆದೆರಡು ದಿನಗಳಿಂದ ಸುರಿಯುತ್ತಿರುವ ಮಳೆಯಿಂದಾಗಿ ಸಂಪೂರ್ಣ ಮುಳುಗಡೆಯಾಗಿದೆ. ಈ ಸೇತುವೆಯಲ್ಲಿ ನೀರಿನ ಮಟ್ಟ ಏರಿಕೆಯಾಗಿದ್ದರೂ ಪಿಕಪ್ ಚಾಲಕರೋರ್ವರು ತಮ್ಮ ವಾಹನವನ್ನು‌ ಚಲಾಯಿಸಿಕೊಂಡು ಬಂದಿದ್ದು ಸೇತುವೆಯ ಮಧ್ಯದಲ್ಲಿ ಸಿಲುಕಿಕೊಂಡಿದೆ.
ಕ್ಷಣದಿಂದ ಕ್ಷಣಕ್ಕೆ ನೀರಿನ‌ಮಟ್ಟ ಏರಿಕೆಯಾಗಿರುವ ಹಿನ್ನೆಲೆಯಲ್ಲಿ ಸ್ಥಳೀಯರು ಅದರೊಳಗಡೆ ಸಿಲುಕಿರುವವರನ್ನು ರಕ್ಷಣೆ ಮಾಡುವ ಕಾರ್ಯದಲ್ಲಿ ನಿರತರಾಗಿದ್ದಾರೆ. ಪಿಕಪ್ ವಾಹನವು ಪಡೀಲು ಭಾಗದಿಂದ ಕೆದಿಲ ಭಾಗಕ್ಕೆ ತೆರಳುತ್ತಿತ್ತು ಎನ್ನಲಾಗಿದೆ.
ಪ್ರತೀ‌ ವರ್ಷ ಮಳೆ ಬಂದಾಗ ಈ ಸೇತುವೆ ಮುಳುಗಡೆಯಾಗುತ್ತಿದ್ದು, ಸಾರ್ವಜನಿಕರು‌ ತೊಂದರೆ ಅನುಭವಿಸುವಂತಾಗಿದೆ. ಗ್ರಾಮ ಪಂಚಾಯತ್ ನಿಂದ ಪ್ರತೀ ವರ್ಷ ಮಳೆಗಾಲದ ಸಂದರ್ಭದಲ್ಲಿ ಜೆಸಿಬಿ ತರಿಸಿ ಸೇತುವೆಯ ಕೆಳಭಾಗದಲ್ಲಿರುವ ಕಸಗಳನ್ನು ಕ್ಲೀನಿಂಗ್ ಮಾಡಲಾಗುತ್ತಿದೆ. ಆದರೂ ಸೇತುವೆ ಮಳೆಗಾಲದಲ್ಲಿ ನಿತ್ಯ ನಿರಂತರವಾಗಿ ಮುಳುಗಡೆಯಾಗುತ್ತಿದೆ. ಶಾಸಕರ ಸಹಿತ ಸಂಬಂಧಪಟ್ಟ ಇಲಾಖಾಧಿಕಾರಿಗಳು ಈ ಬಗ್ಗೆ ಗಮನ ಹರಿಸಿ ಇದಕ್ಕೊಂದು ಸೂಕ್ತ ಪರಿಹಾರ ಕಂಡುಕೊಳ್ಳಬೇಕಾಗಿ ಸಾರ್ವಜನಿಕರು ಒಕ್ಕೊರಳಿನಿಂದ ಆಗ್ರಹಿಸಿದ್ದಾರೆ.

Leave a Reply

You May Have Missed

error: Content is protected !!