ಮುಳಿಯ ಗಾನರಥ ಸೀಸನ್-1 ಗ್ರ್ಯಾಂಡ್ ಫಿನಾಲೆ: ಜೂನಿಯರ್ ವಿಭಾಗದಲ್ಲಿ ಪಲ್ಲವಿ ಆರ್.ಕೆ. ಸೀನಿಯರ್ ವಿಭಾಗದಲ್ಲಿ ಮಾಳವಿಕ ಗೆ ಪ್ರಶಸ್ತಿ

ಮುಳಿಯ ಗಾನರಥ ಸೀಸನ್-1 ಗ್ರ್ಯಾಂಡ್ ಫಿನಾಲೆ: ಜೂನಿಯರ್ ವಿಭಾಗದಲ್ಲಿ ಪಲ್ಲವಿ ಆರ್.ಕೆ. ಸೀನಿಯರ್ ವಿಭಾಗದಲ್ಲಿ ಮಾಳವಿಕ ಗೆ ಪ್ರಶಸ್ತಿ

ಪುತ್ತೂರು: ಗ್ರಾಮೀಣ ಪ್ರತಿಭೆಗಳಿಗೆ ವೇದಿಕೆ ಒದಗಿಸುವ ನಿಟ್ಟಿನಲ್ಲಿ ಪುತ್ತೂರಿನ ಹೆಸರಾಂತ ಮುಳಿಯ ಜ್ಯುವೆಲ್ಸ್‌ನ ವತಿಯಿಂದ ನಡೆಸಲಾದ ಮುಳಿಯ ಗಾನರಥ ಕರೋಕೆ ಹಾಡುಗಳ ಗಾಯನ ಸ್ಪರ್ಧೆಯ ಗ್ರ್ಯಾಂಡ್‌ ಫಿನಾಲೆಯು ಇನ್ನರ್‌ವೀಲ್‌ ಕ್ಲಬ್‌ನ ಸಹಯೋಗದಲ್ಲಿ ನಡೆಯಿತು.

ಜೂನಿಯರ್ ವಿಭಾಗದಲ್ಲಿ ಪಲ್ಲವಿ ಆರ್(ಪ್ರಥಮ), ಮೃನಾಲ್ (ದ್ವಿತೀಯ), ವಿಭಾಶ್ರೀ (ತೃತೀಯ ಹಾಗೂ ಸೀನಿಯರ್ ವಿಭಾಗದಲ್ಲಿ ಮಾಳವಿಕ (ಪ್ರಥಮ), ವಿನೋದ್ ಜಾಲ್ಸೂರ್ (ದ್ವಿತೀಯ) ಹಾಗೂ ಪವಿತ್ರ ಆರ್ (ತೃತೀಯ) ಬಹುಮಾನಗಳನ್ನು ಪಡೆದರು.

ಪ್ರಥಮ ಬಹುಮಾನ ಪಡೆದವರಿಗೆ ಗಾನ ಕೋಗಿಲೆ, ಚಿನ್ನದ ನಾಣ್ಯ ಹಾಗೂ ಪ್ರಶಸ್ತಿ ನೀಡಿ ಗೌರವಿಸಲಾಯಿತು. ದ್ವಿತೀಯ ಮತ್ತು ತೃತೀಯ ಸ್ಥಾನ ಪಡೆದವರಿಗೆ ಪ್ರಶಸ್ತಿ ಹಾಗೂ ಬೆಳ್ಳಿಯ ನಾಣ್ಯ ಮತ್ತು ಗ್ರ್ಯಾಂಡ್ ಫಿನಾಲೆಯಲ್ಲಿ ಭಾಗವಹಿಸಿದ ಸ್ಪರ್ಧಿಗಳಿಗೆ ಬೆಳ್ಳಿಯ ನಾಣ್ಯ ನೀಡಿ ಗೌರವಿಸಲಾಯಿತು. ಗಣೇಶ್ ಮಂಗಳೂರು, ಮಿಥುನ್ ರಾಜ್ ಕಬಕ ಹಾಗೂ ವಿದ್ಯಾಶ್ರೀ ಕಲ್ಲಡ್ಕ ತೀರ್ಪುಗಾರರಾಗಿದ್ದರು.

ಕಳೆದ ಎರಡು ವರ್ಷಗಳ ಹಿಂದೆ ಪ್ರಾರಂಭಗೊಂಡ ಗಾನರಥ ಗಾಯನ ಸ್ಪರ್ಧೆಯು ಕಲ್ಲಡ್ಕ, ವಿಟ್ಲ, ಈಶ್ವರಮಂಗಲ, ಕಬಕ, ಉಪ್ಪಿನಂಗಡಿ, ನೆಲ್ಯಾಡಿ, ಬೆಳ್ಳಾರೆ, ಸುಬ್ರಹ್ಮಣ್ಯ ಹಾಗೂ ಪುತ್ತೂರು ಸಹಿತ 9 ಕಡೆಗಳಲ್ಲಿ ಯಶಸ್ವಿಯಾಗಿ ನಡೆದು ಬಂದು ಒಟ್ಟು 400ಕ್ಕಿಂತಲೂ ಹೆಚ್ಚು ಸ್ಪರ್ಧಿಗಳು ಭಾಗವಹಿಸಿದ್ದರು. ಉದಯಕುಮಾರ್ ಲಾಯಿಲ ಅವರ ನೇತೃತ್ವದಲ್ಲಿ ಗಾನರಥ ಸಂಯೋಜನೆಗೊಂಡಿತು.

ಪುತ್ತೂರಿನ ಜೈನಭವನದಲ್ಲಿ ಶನಿವಾರ (ಆ.26) ನಡೆದ ಗ್ರ್ಯಾಂಡ್ ಫಿನಾಲೆಯನ್ನು ಮುಳಿಯ ಜ್ಯುವೆಲ್ಸ್‌ನ ಆಡಳಿತ ನಿರ್ದೇಶಕ ಕೃಷ್ಣ ನಾರಾಯಣ ಮುಳಿಯ ಹಾಗೂ ಇನ್ನರ್‌ವೀಲ್ ಕ್ಲಬ್‌ ಅಧ್ಯಕ್ಷೆ ಅಶ್ವಿನಿಕೃಷ್ಣ ದೀಪ ಬೆಳಗಿ ಉದ್ಘಾಟಿಸಿದರು. ಕಾರ್ಯಕ್ರಮ ಸಂಯೋಜಕರಾದ ಆನಂದ ಕುಲಾಲ್, ರಮೇಶ್ ಕುಲಾಲ್, ಮುಳಿಯ ಜ್ಯುವೆಲ್ಸ್‌ನ ಶಾಖಾ ಪ್ರಬಂಧಕ ನಾಮದೇವ್ ಮಲ್ಯ, ಸ್ಟೋರ್ ಮ್ಯಾನೇಜರ್ ಪ್ರವೀಣ್ ಮತ್ತು ಸಂಜೀವ ಉಪಸ್ಥಿತರಿದ್ದರು.

ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿದ್ದ ನೃತ್ಯೋಪಾಸನಾ ಕಲಾ ಕೇಂದ್ರದ ನಿರ್ದೇಶಕಿ ಶಾಲಿನಿ ಆತ್ಮಭೂಷಣ್ ಮಾತನಾಡಿ, ಹಲವು ಸಾಮಾಜಿಕ ಕಾರ್ಯಕ್ರಮಗಳನ್ನು ನಡೆಸುತ್ತಿರುವ ಮುಳಿಯ ಜ್ಯುವೆಲ್ಸ್‌ ಗ್ರಾಮೀಣ ಪ್ರತಭೆಗಳನ್ನು ಹುಡುಕಿ ಅವರಿಗೆ ವೇದಿಕೆ ಒದಗಿಸುವ ಮಹತ್ತರವಾದ ಕಾರ್ಯ ಮಾಡಿರುವುದು ಶ್ಲಾಘನೀಯ. ದಿರಿಂದಾಗಿ ದೂರದ ಬೆಂಗಳೂರು, ಮಂಗಳೂರುಗಳಲ್ಲಿ ನಡೆಯುತ್ತಿರುವ ಕಾರ್ಯಕ್ರಮಗಳನ್ನು ಪುತ್ತೂರಿನಲ್ಲಿಯೂ ಕಾಣುವಂತಾಗಿದೆ ಎಂದರು.

ಅಧ್ಯಕ್ಷತೆ ವಹಿಸಿದ್ದ ಮುಳಿಯ ಜ್ಯುವೆಲ್ಸ್‌ನ ಮುಖ್ಯ ಆಡಳಿತ ನಿರ್ದೇಶಕ ಕೇಶವ ಪ್ರಸಾದ್ ಮುಳಿಯ ಮಾತನಾಡಿ, ಗ್ರಾಮೀಣ ಪ್ರತಿಭೆಗಳಿಗೆ ಅವಕಾಶ ನೀಡುವ ಮುಳಿಯ ಗಾನರಥ ಸೀಸನ್-1 ಮುಕ್ತಾಯಗೊಂಡಿದೆ. ಇನ್ನು ಸೀಸನ್ -2 ಸೆಪ್ಟೆಂಬರ್ ಕೊನೆಯ ವಾರದಲ್ಲಿ ಪ್ರಾರಂಭಗೊಂಡು ಡಿಸೆಂಬರ್ ಅಂತ್ಯಕ್ಕೆ ಮುಕ್ತಾಯಗೊಳ್ಳಲಿದೆ. ಗಾನ ಮತ್ತು ನೃತ್ಯ ಒಂದೇ ನಾಣ್ಯದ ಎರಡು ಮುಖಗಳು. ಪ್ರತಿಭೆಗಳು ಬೆಳೆಯಲು ಪರಿಶ್ರಮ ಮುಖ್ಯ ಎಂದರು.

ತೀರ್ಪುಗಾರರಾದ ವಿದ್ಯಾಶ್ರೀ ಕಲ್ಲಡ್ಕ ಮಾತನಾಡಿ, ಸ್ಥಳೀಯ ಪ್ರತಿಭೆಗಳಿಗೆ ಸ್ಥಳೀಯವಾಗಿ ವೇದಿಕೆ ಒದಗಿಸುತ್ತಿರುವ ಉತ್ತಮ ಕಾರ್ಯ ಮಾಡಿರುವ ಮುಳಿಯ ಜ್ಯುವೆಲ್ಸ್‌ಗೆ ಅಭಿನಂದನೆ ಸಲ್ಲಿಸಿದರು. ಗಣೇಶ್ ಮಂಗಳೂರು ಮಾಥನಾಡಿ, ಸ್ಥಳೀಯ ಪ್ರತಿಭೆಗಳಿಗೆ ಮುಳಿಯ ಜ್ಯವೆಲ್ಸ್‌ ಚಿನ್ನದಂತಹ ವೇದಿಕೆ ಒದಗಿಸಿದೆ. ಇಲ್ಲಿನ ಪ್ರತಿಭೆಗಳು ಸಾಣೆ ಹಿಡಿದ ವಜ್ರದಂತೆ ಹೊಳೆಯಲಿ ಎಂದರು.

ಮುಳಿಯ ಜ್ಯುವೆಲ್ಸ್‌ನ ನಿರ್ದೇಶಕಿ ಕೃಷ್ಣವೇಣಿ ಪ್ರಸಾದ್ ಮುಳಿಯ ಮಾತನಾಡಿ, ಕಲೆ, ಸಾಹಿತ್ಯ, ರಾಗ, ತಾಳವನ್ನು ಗಮನದಲ್ಲಿಟ್ಟುಕೊಂಡು ಹಾಡಿದಾಗ ಶ್ರೋತೃಗಳಿಗೆ ರೋಮಾಂಚನ ಉಂಟುಮಾಡುತ್ತದೆ. ಈ ನಿಟ್ಟಿನಲ್ಲಿ ಕಲೆಯನ್ನು ಬೆಳೆಸಲು ಪ್ರೋತ್ಸಾಹಿಸಬೇಕು ಎಂದರು.

ನಾಯಕ್ ಕಿಚನ್ಸ್ ಯೂಟ್ಯೂಬ್ ಬ್ಲಾಗರ್ ಆಶಾ ನಾಯಕ್ ಅತಿಥಿಯಾಗಿ ಭಾಗವಹಿಸಿದ್ದರು. ತೀರ್ಪುಗಾರರಾದ ಮಿಥುನ್ ರಾಜ್, ಮುಳಿಯ ಜ್ಯುವೆಲ್ಸ್‌ನ ಪ್ರವೀಣ್‌ ವೇದಿಕೆಯಲ್ಲಿ ಉಪಸ್ಥಿತರಿದ್ದರು.

ಮುಳಿಯ ಜ್ಯುವೆಲ್ಸ್‌ನ ಶೋರೂಂ ಮ್ಯಾನೇಜರ್ ನಾಮದೇವ ಮಲ್ಯ ಸ್ವಾಗತಿಸಿದರು. ಸಹಪ್ರಬಂಧಕ ಯತೀಶ್, ಮೋಹಿನಿ, ನಯನಾ, ಹರಿಣಾಕ್ಷಿ ಅತಿಥಿಗಳಿಗೆ ಹೂ ನೀಡಿ ಸ್ವಾಗತಿಸಿದರು. ಮಾರ್ಕೆಟಿಂಗ್ ಮ್ಯಾನೇಜರ್ ಸಂಜೀವ ವಂದಿಸಿದರು. ನಿರೂಪಕಿ ಪ್ರಜ್ಞಾ ಓಡಿಲ್ನಾಳ ಕಾರ್ಯಕ್ರಮ ನಿರೂಪಿಸಿದರು. ನಾಟ್ಯರಂಜಿನಿ ಕಲಾವಿದರಿಂದ ವಿವಿಧ ಸಾಂಸ್ಕೃತಿಕ ನೃತ್ಯ ಕಾರ್ಯಕ್ರಮ ನಡೆದವು.

Leave a Reply

You May Have Missed

error: Content is protected !!