ಕಡಬ: ಬೈಕ್, ಗೂಡ್ಸ್ ವಾಹನ ಡಿಕ್ಕಿ; ಸವಾರ, ವಿವೇಕಾನಂದ ಕಾಲೇಜು ವಿದ್ಯಾರ್ಥಿ ಮೃತ್ಯು

ಕಡಬ: ಬೈಕ್, ಗೂಡ್ಸ್ ವಾಹನ ಡಿಕ್ಕಿ; ಸವಾರ, ವಿವೇಕಾನಂದ ಕಾಲೇಜು ವಿದ್ಯಾರ್ಥಿ ಮೃತ್ಯು

ಕಡಬ: ಬೈಕ್ ಹಾಗೂ ಮಿನಿ ಗೂಡ್ಸ್ ವಾಹನವೊಂದರ ನಡುವೆ ಡಿಕ್ಕಿ ಸಂಭವಿಸಿ ಬೈಕ್ ಸವಾರ ಮೃತಪಟ್ಟ ಘಟನೆ ಉಪ್ಪಿನಂಗಡಿ-ಸುಬ್ರಹ್ಮಣ್ಯ ರಾಜ್ಯ ಹೆದ್ದಾರಿಯ ರಾಮಕುಂಜ ಗ್ರಾಮದ ಗೋಳಿತ್ತಡಿ ಸಮೀಪ ಮಾ.4ರಂದು ರಾತ್ರಿ ನಡೆದಿದೆ.

ಪುತ್ತೂರು ವಿವೇಕಾನಂದ ಪದವಿ ಕಾಲೇಜಿನ ಅಂತಿಮ ಬಿ.ಎ.ವಿದ್ಯಾರ್ಥಿ, ಬೆಳ್ತಂಗಡಿ ತಾಲೂಕಿನ ಬಾರ್ಯ ಗ್ರಾಮದ ಅಜೀರ ನಿವಾಸಿ ಗುರುವಪ್ಪ ಅವರ ಪುತ್ರ ಶ್ರೀಜಿಸ್(20ವ.)ಮೃತಪಟ್ಟ ದುರ್ದೈವಿಯಾಗಿದ್ದಾರೆ. ಶ್ರೀಜಿಸ್‌ರವರು ರಾಮಕುಂಜ ಶಾರದಾನಗರದಲ್ಲಿರುವ ಚಿಕ್ಕಮ, ಅಂಗನವಾಡಿ ಕಾರ್ಯಕರ್ತೆಯೂ ಆಗಿರುವ ಯಮುನಾಕೇಶವ ಗಾಂಧಿಪೇಟೆ ಅವರ ಮನೆಗೆ ಬಂದು ರಾತ್ರಿ ಅಲ್ಲಿಂದ ಆಲಂಕಾರು ಸಮೀಪದ ನೆಕ್ಕರೆಯಲ್ಲಿರುವ ಪೆಟ್ರೋಲ್ ಪಂಪ್‌ನಲ್ಲಿ ಬೈಕ್‌ಗೆ ಪೆಟ್ರೋಲ್ ತುಂಬಿಸಿ ಮತ್ತೆ ಉಪ್ಪಿನಂಗಡಿ ಕಡೆಗೆ ಬರುತ್ತಿದ್ದ ವೇಳೆ ಉಪ್ಪಿನಂಗಡಿಯಿಂದ ಕಡಬ ಕಡೆಗೆ ಹೋಗುತ್ತಿದ್ದ ಮಿನಿ ಗೂಡ್ಸ್(ಜೀತ್) ನಡುವೆ ಗೋಳಿತ್ತಡಿ ಸಮೀಪ ಡಿಕ್ಕಿ ಸಂಭವಿಸಿದೆ. ಘಟನೆಯಲ್ಲಿ ಗಂಭೀರ ಗಾಯಗೊಂಡಿದ್ದ ಶ್ರೀಜಿಸ್‌ರನ್ನು ತಕ್ಷಣ ಮಂಗಳೂರಿನ ಎ.ಜೆ.ಆಸ್ಪತ್ರೆಗೆ ಕರೆತಂದು ಚಿಕಿತ್ಸೆ ನೀಡಲಾಯಿತಾದರೂ ಚಿಕಿತ್ಸೆಗೆ ಸ್ಪಂದಿಸದೆ ಅವರು ಮೃತಪಟ್ಟರು ಎಂದು ವರದಿಯಾಗಿದೆ.

ಮೃತ ಶ್ರೀಜಿಸ್‌ರವರು ತಂದೆ ಗುರುವಪ್ಪ, ತಾಯಿ ಗಿರಿಜಾ, ಸಹೋದರರಾದ ಸುನೀಶ್ ಹಾಗೂ ಸುಜಿಸ್‌ರವರನ್ನು ಅಗಲಿದ್ದಾರೆ.

Leave a Reply

You May Have Missed

error: Content is protected !!