ಬಿಜೆಪಿ ಕಾರ್ಯಕರ್ತನ ಬಂಧನ: ಘಟನೆ ಖಂಡಿಸಿ ರಾತ್ರಿ ಬಿಜೆಪಿ ಕಾರ್ಯಕರ್ತರ ನೇತೃತ್ವದಲ್ಲಿ ಠಾಣೆ ಎದುರು ಪ್ರತಿಭಟನೆ ನಡೆಸಿದ ಶಾಸಕ ಹರೀಶ್ ಪೂಂಜ

ಬಿಜೆಪಿ ಕಾರ್ಯಕರ್ತನ ಬಂಧನ: ಘಟನೆ ಖಂಡಿಸಿ ರಾತ್ರಿ ಬಿಜೆಪಿ ಕಾರ್ಯಕರ್ತರ ನೇತೃತ್ವದಲ್ಲಿ ಠಾಣೆ ಎದುರು ಪ್ರತಿಭಟನೆ ನಡೆಸಿದ ಶಾಸಕ ಹರೀಶ್ ಪೂಂಜ

ಬೆಳ್ತಂಗಡಿ: ಮೇಲಂತ ಬೆಟ್ಟು ಗ್ರಾಮದಲ್ಲಿ ನಡೆಯುತ್ತಿತ್ತೆನ್ನಲಾದ ಅಕ್ರಮ ಕಲ್ಲಿನ ಕೋರೆಗೆ ಮೇ.18ರ ಸಂಜೆ ಬೆಳ್ತಂಗಡಿ ತಹಶೀಲ್ದಾ‌ರ್ ನೇತೃತ್ವದ ಪೊಲೀಸ್‌ ತಂಡ ದಾಳಿ ನೆಪದಲ್ಲಿ ಮಧ್ಯರಾತ್ರಿ ಬೆಳ್ತಂಗಡಿ ಬಿಜೆಪಿ ಯುವ ಮೋರ್ಚಾ ಅಧ್ಯಕ್ಷ ಶಶಿರಾಜ್‌ ಅವರ ಮನೆಯಿಂದ ಬಂಧನ ಮಾಡಿರುವ ಬಗ್ಗೆ ಶಾಸಕ ಹರೀಶ್ ಪೂಂಜ ಆಕ್ರೋಶ ವ್ಯಕ್ತಪಡಿಸಿ ಪೊಲೀಸ್‌ ಠಾಣೆ ಎದುರು ಪ್ರತಿಭಟನೆ ನಡೆಸಿದರು.

ಬೆಳ್ತಂಗಡಿ ಪೊಲೀಸರು ಕಾಂಗ್ರೆಸ್ ಏಜೆಂಟರಂತೆ ವರ್ತಿಸುತಿದ್ದು ಯಾರೋ ಹೇಳಿದ್ದಾರೆ ಎಂಬ ನೆಪವೊಡ್ಡಿ ಮಧ್ಯರಾತ್ರಿ ಮನೆಗೆ ನುಗ್ಗಿ ಬಂಧಿಸಿರುವುದು ಖಂಡನೀಯ. ಮನೆಯಲ್ಲಿ ಹೆಂಗಸರು ಮಕ್ಕಳ ಎದುರಲ್ಲಿಯೇ ಬಂಧಿಸಿರುವುದು ಪ್ರಜಾಪ್ರಭುತ್ವ ವಿರೋಧಿ ಕ್ರಮವಾಗಿದೆ ಎಂದು ಆರೋಪಿಸಿದರು. ತಹಶೀಲ್ದಾರ್ ದೂರು ನೀಡಿದ್ದಾರೆ ಎಂಬ ಕಾರಣವೊಡ್ಡಿ ಅಮಾಯಕನನ್ನು ಯಾವುದೇ ದಾಖಲೆ ಇಲ್ಲದೇ ಬಂಧಿಸಿರುವುದು ತಪ್ಪು ತಕ್ಷಣ ಅವರನ್ನು ಬಿಡುಗಡೆಗೊಳಿಸಬೇಕು. ಬಿಡುಗಡೆಗೊಳಿಸುವವರೆಗೆ ಠಾಣೆಯ ಎದುರಿನಿಂದ ಕದಲುವ ಪ್ರಶ್ನೆಯೇ ಇಲ್ಲ ಒಬ್ಬ ಅಮಾಯಕ ಬಿಜೆಪಿ ಕಾರ್ಯಕರ್ತನಿಗೆ ಅನ್ಯಾಯವಾಗುವುದನ್ನು ಶಾಸಕನಾಗಿ ಸಹಿಸುವ ಪ್ರಶ್ನೆಯೇ ಇಲ್ಲ. ಕೊನೆಯ ಕ್ಷಣದಲ್ಲಿ ಶಶಿರಾಜ್ ಅವರನ್ನು ಕಾಂಗ್ರೆಸ್ ನ ಯಾರೋ ಸೂಚಿಸಿದ ಹಿನ್ನೆಲೆಯಲ್ಲಿ ಉದ್ದೇಶಪೂರ್ವಕವಾಗಿ ಬಂಧಿಸಿರುವುದನ್ನು ಖಂಡಿಸಿ ಹಾಗೂ ಬಿಜೆಪಿ ಕಾರ್ಯಕರ್ತರ ಮೇಲೆ ಪೊಲೀಸರು ನಡೆಸುವ ದೌರ್ಜನ್ಯ ವಿರುದ್ಧ ಪ್ರತಿಭಟನೆ ಅನೀವಾರ್ಯವಾಗಲಿದೆ ಎಂದರು.

ಬೆಳ್ತಂಗಡಿ ಬಿಜೆಪಿ ಮಂಡಲ ಅಧ್ಯಕ್ಷ ಶ್ರೀನಿವಾಸ್‌ ರಾವ್ ಧರ್ಮಸ್ಥಳ ಮಾತನಾಡಿ ಒಬ್ಬ ಬಿಜೆಪಿ ಕಾರ್ಯಕರ್ತನನ್ನು ಮಧ್ಯರಾತ್ರಿ ಮನೆಗೆ ನುಗ್ಗಿ ಮನೆಯವರ ಎದುರಲ್ಲೇ ಬಂಧಿಸಿರುವುದು ಖಂಡನೀಯ ಇದು ಪ್ರಜಾಪ್ರಭುತ್ವ ವಿರೋಧಿ ಧೋರಣೆಯಾಗಿದೆ. ರಾಜ್ಯದಲ್ಲಿ ಕಾಂಗ್ರೆಸ್‌ ಸರ್ಕಾರ ಅಸ್ತಿತ್ವಕ್ಕೆ ಬಂದ ನಂತರ ಬಿಜೆಪಿ ಕಾರ್ಯಕರ್ತರನ್ನು ಟಾರ್ಗೆಟ್ ಮಾಡಲಾಗುತ್ತಿದೆ. ಈ ಮೂಲಕ ಸುಳ್ಳು ಕೇಸ್‌ ದಾಖಲಿಸಿ ಪೊಲೀಸರು ಬಂಧಿಸಿ ಅವರನ್ನು ಧಮನಿಸುವ ಕೆಲಸ ನಡೆಯುತ್ತಿದೆ. ಮುಂದಿನ ದಿನಗಳಲ್ಲಿ ಬೆಳ್ತಂಗಡಿ ಬಿಜೆಪಿ ಮಂಡಲದ ನೇತೃತ್ವದಲ್ಲಿ ಕಾಂಗ್ರೆಸ್‌ ಸರ್ಕಾರದ ವಿರುದ್ಧ ಬೃಹತ್ ಹೋರಾಟ ಮಾಡಲಾಗುವುದು ಎಂದರು.

ಬೆಳ್ತಂಗಡಿ ಠಾಣೆಯ ಎದುರು ನೂರಾರು ಬಿಜೆಪಿ ಕಾರ್ಯಕರ್ತರು ಜಮಾಯಿಸಿದ್ದರು.

Leave a Reply

You May Have Missed

error: Content is protected !!