ಪಡುಬೆಟ್ಟು ಒಕ್ಕೂಟದ ವಾರ್ಷಿಕೋತ್ಸವ



ನೆಲ್ಯಾಡಿ: ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಿ.ಸಿ ಟ್ರಸ್ಟ್ (ರಿ) ಕಡಬ ತಾಲೂಕು ನೆಲ್ಯಾಡಿ ವಲಯದ ಪಡುಬೆಟ್ಟು ಒಕ್ಕೂಟದ ವಾರ್ಷಿಕೋತ್ಸವ ಸಮಾರಂಭವು ಪಡುಬೆಟ್ಟು ದ.ಕ.ಜಿಲ್ಲಾ ಪಂಚಾಯತ್ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ನಡೆಯಿತು.

ಅಖಿಲ ಕರ್ನಾಟಕ ಜನಜಾಗೃತಿ ವೇದಿಕೆ ನೆಲ್ಯಾಡಿ ವಲಯದ ಅಧ್ಯಕ್ಷ ಜಯಾನಂದ ಬಂಟ್ರಿಯಾಲ್ ದೀಪ ಪ್ರಜ್ವಲನೆ ಮಾಡುವುದರ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಅವರು ಗ್ರಾಮಾಭಿವೃದ್ಧಿ ಯೋಜನೆಯು ಗ್ರಾಮೀಣ ಸಮಾಜದಲ್ಲಿ ತಂದಿರುವ ಬದಲಾವಣೆಗಳ ಬಗ್ಗೆ ಉಲ್ಲೇಖಿಸಿ, ಒಕ್ಕೂಟದ ಸಾಧನೆಗೆ ಅಭಿನಂದನೆ ಸಲ್ಲಿಸಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಪಡುಬೆಟ್ಟು ಒಕ್ಕೂಟದ ಅಧ್ಯಕ್ಷ ಜಾನ್ ಮೊಂತೇರೋ ವಹಿಸಿದ್ದರು. ಅತಿಥಿಯಾಗಿ ಆಗಮಿಸಿದ ಶ್ರೀ ಕ್ಷೇ. ಧ. ಗ್ರಾ. ಯೋಜನೆ ಕಡಬ ತಾಲೂಕಿನ ಯೋಜನಾಧಿಕಾರಿ ಪ್ರಕಾಶ್ ಕುಮಾರ್ ಮಾತನಾಡಿ ಸಂಘ ಅಂದರೆ ದೋಣಿ, ಸಾಲ ಅಂದರೆ ಏಣಿ — ಇದರ ಸದುಪಯೋಗಪಡಿಸಿಕೊಂಡರೆ ಮಾತ್ರ ಕುಟುಂಬದ ಪ್ರಗತಿ ಸಾಧ್ಯ ಎಂದು ಅರ್ಥಪೂರ್ಣವಾಗಿ ತಿಳಿಹೇಳಿ, ಸಂಘದ ಏಕತೆ ಮತ್ತು ಬದ್ಧತೆಯ ಮಹತ್ವವನ್ನು ಸಾರಿದರು.
ಶ್ರೀ ಶಾಸ್ತರೇಶ್ವರ ದೇವಸ್ಥಾನದ ಅಧ್ಯಕ್ಷ ಸುಂದರ ಗೌಡ ಅತ್ರಿಜಾಲು ಸರ್ಕಾರದ ಕೆಲಸಕ್ಕಿಂತ ಒಂದು ಹೆಜ್ಜೆ ಮುಂದಿಟ್ಟು ಸೇವೆ ಮಾಡುವವರು ಖಾವಂದರು ಎಂದು ಖಾವಂದರ ನಿಸ್ವಾರ್ಥ ಸೇವೆಯನ್ನು ಹೊಗಳಿದರು. ಕೇಂದ್ರ ಒಕ್ಕೂಟದ ಮಾಜಿ ಅಧ್ಯಕ್ಷ ಬಾಲಕೃಷ್ಣ ಗೌಡ ಹಾರ್ಪಳ ಮಾತನಾಡಿ ಸದಸ್ಯರ ಕುಟುಂಬಗಳು ಪ್ರಗತಿಪರವಾಗಿ ಬೆಳೆಯಲಿ ಎಂದು ಶುಭಾಶಯ ಕೋರಿದರು.
ಕೇಂದ್ರ ಒಕ್ಕೂಟದ ಅಧ್ಯಕ್ಷ ಸಂತೋಷ್ ಕೇನ್ಯ, ನೆಲ್ಯಾಡಿ ಗ್ರಾಮ ಪಂಚಾಯತ್ ಅಧ್ಯಕ್ಷ ಸಲಾಂ ಬಿಲಾಲ್, ಶ್ರೀ ಕ್ಷೇ. ಧ. ಗ್ರಾ.ಯೋಜನೆ ನೆಲ್ಯಾಡಿ ವಲಯದ ಅಧ್ಯಕ್ಷ ಕುಶಾಲಪ್ಪಗೌಡ ಪಿ.ಎನ್. ಮುಂತಾದವರು ವೇದಿಕೆಯಲ್ಲಿ ಉಪಸ್ಥಿತರಿದ್ದು, ಒಕ್ಕೂಟದ ಕಾರ್ಯಕ್ಷಮತೆಗೆ ಪ್ರಶಂಸಿಸಿದರು.
ನೆಲ್ಯಾಡಿ ವಲಯ ಮೇಲ್ವಿಚಾರಕರು ಅನಂದ.ಡಿ.ಪಿ ಸ್ವಾಗತಿಸಿದರು. ರಜನಿ ಕಾರ್ಯಕ್ರಮ ನಿರೂಪಿಸಿದರು. ಸೇವಾ ಪ್ರತಿನಿಧಿ ಮೋಹಿನಿ ವಂದಿಸಿದರು.
ಕಾರ್ಯಕ್ರಮದ ಆರಂಭದಲ್ಲಿ ಶ್ರೀ ಶಾಸ್ತಾರೇಶ್ವರ ಭಜನಾ ತಂಡದಿಂದ ಭಜನಾ ಕಾರ್ಯಕ್ರಮ ಜರುಗಿತು. ನಂತರ ಸದಸ್ಯರಿಂದ ಮನೋರಂಜನಾ ಕಾರ್ಯಕ್ರಮಗಳು ನಡೆಯಿತು. ಒಕ್ಕೂಟದ ಪದಾಧಿಕಾರಿಗಳು, ಸದಸ್ಯರು ಹಾಗೂ ಅನೇಕ ಗಣ್ಯರು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.





















Leave a Reply