ಉಪ್ಪಿನಂಗಡಿ: ಹಿಜಾಬ್‌ಗೆ ಅವಕಾಶ ನಿರಾಕರಣೆ, ಪರೀಕ್ಷೆ ಬಹಿಷ್ಕರಿಸಿದ ಕಾಲೇಜಿನ ವಿದ್ಯಾರ್ಥಿಗಳು

ಉಪ್ಪಿನಂಗಡಿ: ಹಿಜಾಬ್‌ಗೆ ಅವಕಾಶ ನಿರಾಕರಣೆ, ಪರೀಕ್ಷೆ ಬಹಿಷ್ಕರಿಸಿದ ಕಾಲೇಜಿನ ವಿದ್ಯಾರ್ಥಿಗಳು

ನೇಸರ ಮಾ.18: ಹಿಜಾಬ್ ಧರಿಸಿ ತರಗತಿಯೊಳಗೆ ಕುಳಿತುಕೊಳ್ಳಲು ಅವಕಾಶ ನೀಡಿಲ್ಲ ಎಂದು ಪರೀಕ್ಷೆಯನ್ನೂ ಕೂಡಾ ಬರೆಯದೇ ಹಿಜಾಬ್‌ ಧಾರಿಣಿ ವಿದ್ಯಾರ್ಥಿನಿಯರು ಹಾಗೂ ವಿದ್ಯಾರ್ಥಿಗಳು ಮನೆಗೆ ತೆರಳಿದ ಘಟನೆ ಶುಕ್ರವಾರ ಉಪ್ಪಿನಂಗಡಿಯ ಸರಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ನಡೆದಿದೆ.
ಕಾಲೇಜಿನ ಕೆಲ ವಿದ್ಯಾರ್ಥಿಗಳು ಶುಕ್ರವಾರ ಹಿಜಾಬ್ ಧರಿಸಿಕೊಂಡು ತರಗತಿಯೊಳಗೆ ಪ್ರವೇಶಿಸಲು ಮುಂದಾಗಿದ್ದು, ಆಗ ರಾಜ್ಯ ಉಚ್ಛನ್ಯಾಯಾಲಯದ ತೀರ್ಪಿನ ಹಿನ್ನೆಲೆಯಲ್ಲಿ ಉಪನ್ಯಾಸಕರು ಅದಕ್ಕೆ ಅವಕಾಶ ಕೊಡಲಿಲ್ಲ. ಅದನ್ನು ವಿರೋಧಿಸಿದ ಹಿಜಾಬ್‌ಧಾರಿಣಿ ವಿದ್ಯಾರ್ಥಿನಿಯರು ಕಾಲೇಜಿನ ಆವರಣದಲ್ಲಿ ನಿಂತುಕೊಂಡು ಪ್ರತಿಭಟಿಸತೊಡಗಿದರು. ಇವರಿಗೆ ಬೆಂಬಲವಾಗಿ ತರಗತಿಯೊಳಗಿದ್ದ ಕೆಲ ವಿದ್ಯಾರ್ಥಿಗಳೂ ತರಗತಿ ಬಹಿಷ್ಕರಿಸಿ ಇವರೊಂದಿಗೆ ಸೇರಿಕೊಂಡರು. ಹಿಜಾಬ್ ತೆಗೆದು ತರಗತಿಯೊಳಗೆ ಬನ್ನಿ. ಪರೀಕ್ಷೆ ಇದ್ದವರು ಹಿಜಾಬ್ ತೆಗೆದು ಬಂದು ಪರೀಕ್ಷೆ ಬರೆಯಿರಿ ಎಂದು ಉಪನ್ಯಾಸಕರು ಪರಿಪರಿಯಾಗಿ ವಿದ್ಯಾರ್ಥಿಗಳ ಮನವೊಲಿಕೆಗೆ ಪ್ರಯತ್ನಿಸಿದರೂ, ಅವರು ತಮ್ಮ ಹಠದಿಂದ ಹಿಂದೆ ಸರಿಯದೇ ಅಲ್ಲೇ ನಿಂತುಕೊಂಡರು. ಬಳಿಕ ಉಪ್ಪಿನಂಗಡಿ ಮಾಲೀಕುದ್ದೀನಾರ್ ಜುಮಾ ಮಸೀದಿಯ ಅಧ್ಯಕ್ಷ ಹಾಜಿ ಮುಸ್ತಾಫ ಕೆಂಪಿ, ಗ್ರಾ.ಪಂ. ಸದಸ್ಯರಾದ ಯು.ಟಿ. ಮುಹಮ್ಮದ್ ತೌಸೀಫ್, ಅಬ್ದುಲ್ ರಶೀದ್ ಹಾಗೂ ಕೆಲ ಮಕ್ಕಳ ಪೋಷಕರು ಕಾಲೇಜಿಗೆ ಆಗಮಿಸಿ, ಪ್ರಾಂಶುಪಾಲರೊಂದಿಗೆ ಸಭೆ ನಡೆಸಿದರು. ಆಗ ಪ್ರಾಂಶುಪಾಲರು ಹೈಕೋರ್ಟ್ ತೀರ್ಪು ಹಾಗೂ ಕಾಲೇಜು ಅಭಿವೃದ್ಧಿ ಸಮಿತಿಯ ತೀರ್ಮಾನವನ್ನು ಅವರಿಗೆ ತಿಳಿಸಿ ಯಾವುದೇ ಕಾರಣಕ್ಕೂ ಹಿಜಾಬ್ ಧರಿಸಿಕೊಂಡವರಿಗೆ ತರಗತಿ ಪ್ರವೇಶಕ್ಕೆ ಅವಕಾಶ ನೀಡಲು ಸಾಧ್ಯವಿಲ್ಲ ಎಂದರು. ಬಳಿಕ ಹೊರ ಬಂದ ಅವರು ಪ್ರತಿಭಟನಾ ನಿರತ ವಿದ್ಯಾರ್ಥಿಗಳೊಂದಿಗೆ ಹಿಜಾಬ್ ಪರ ನಾವು ಕೂಡಾ ಇದ್ದೇವೆ. ನಿಮ್ಮ ಹೋರಾಟಕ್ಕೆ ನಮ್ಮ ಬೆಂಬಲವಿದೆ. ಚೆಂಡು ಈಗ ಸುಪ್ರೀಂಕೋರ್ಟ್‌ನ ಅಂಗಳದಲ್ಲಿದೆ. ಆದ್ದರಿಂದ ಇಲ್ಲಿ ಹೋರಾಟ ಮಾಡಿ ಪ್ರಯೋಜನವಿಲ್ಲ ಎಂದರಲ್ಲದೆ, ನಿಮ್ಮ ಶೈಕ್ಷಣಿಕ ಭವಿಷ್ಯಕ್ಕಾಗಿ ಕಾಲೇಜಿನ ತೀರ್ಮಾನಕ್ಕೆ ಒಪ್ಪಿ ನೀವು ತರಗತಿಗೆ ಹಾಜರಾಗಿ ಪರೀಕ್ಷೆ ಬರೆಯುವಂತೆ ಮನವಿ ಮಾಡಿದರು. ಆದರೆ ವಿದ್ಯಾರ್ಥಿಗಳು ಅದನ್ನು ಕೇಳಿಸಿಕೊಳ್ಳದೇ ಯಾವುದೇ ಕಾರಣಕ್ಕೂ ನಾವು ಹಿಜಾಬ್ ತೆಗೆದು ಪರೀಕ್ಷೆ ಕೂಡಾ ಬರೆಯುವುದಿಲ್ಲ ಎಂದು ಪಟ್ಟುಹಿಡಿದರು. ಸತತ ಪ್ರಯತ್ನ ಮಾಡಿಯೂ ಇವರ ಮನವೊಲಿಸಲು ಸಾಧ್ಯವಾಗದಿದ್ದಾಗ ಅಲ್ಲಿದ್ದ ಮುಸ್ಲಿಂ ಮುಖಂಡರು, ನೀವು ತರಗತಿಗೆ ಬರುವುದಿಲ್ಲವಾದರೆ ಮನೆಗೆ ಹೋಗಿ. ಇಲ್ಲಿ ಪರೀಕ್ಷೆ ನಡೆಯುತ್ತಿದೆ. ನೀವು ಹೀಗೆ ಕಾಲೇಜಿನ ಹೊರಗಡೆ ನಿಂತರೆ ಪರೀಕ್ಷೆ ಬರೆಯುತ್ತಿರುವ ಉಳಿದ ಮಕ್ಕಳಿಗೆ ತೊಂದರೆಯಾಗುತ್ತದೆ. ಅವರಿಗೆ ತೊಂದರೆ ಕೊಡುವುದು ಸರಿಯಲ್ಲ. ಹಿಜಾಬ್ ಅವಕಾಶಕ್ಕಾಗಿ ಎಲ್ಲಿ ಹೋರಾಟ ಮಾಡಬೇಕೋ ಅಲ್ಲಿಯೇ ಹೋರಾಟ ಮಾಡೋಣ ಎಂದರು. ಇವರ ಮಾತಿಗೆ ಒಪ್ಪಿದ ವಿದ್ಯಾರ್ಥಿಗಳು ಮತ್ತೆ ಕಾಲೇಜಿನಿಂದ ನಿರ್ಗಮಿಸಿದರು.

—ಜಾಹೀರಾತು—

Previous post

ಕಡಬ ತಾಲೂಕು ರೆಂಜಿಲಾಡಿ ಗ್ರಾಮದ ನೂಜಿ ಶ್ರೀ ಉಳ್ಳಾಲ್ತಿ ಅಮ್ಮನವರ ದೈವಸ್ಥಾನದ “ಭಕ್ತಿದ ಪೊರ್ಪ” ಭಕ್ತಿಗೀತೆ ಬಿಡುಗಡೆ

Next post

ಸುಬ್ರಹ್ಮಣ್ಯ : ಕೆ ಎಸ್ ಎಸ್ ಕಾಲೇಜಿನಲ್ಲಿ International Taxation ಹಾಗೂ Double Taxation ಕುರಿತು ಮಾಹಿತಿ ಕಾರ್ಯಗಾರ

Leave a Reply

You May Have Missed

error: Content is protected !!