ಸ್ಪಂದನಾ ನಿಧನ: ಮಲ್ಲೇಶ್ವರಂನಲ್ಲಿ ದರ್ಶನ; ಹರಿಶ್ಚಂದ್ರ ಘಾಟ್‍ ನಲ್ಲಿ ಅಂತಿಮ ಸಂಸ್ಕಾರ

ಸ್ಪಂದನಾ ನಿಧನ: ಮಲ್ಲೇಶ್ವರಂನಲ್ಲಿ ದರ್ಶನ; ಹರಿಶ್ಚಂದ್ರ ಘಾಟ್‍ ನಲ್ಲಿ ಅಂತಿಮ ಸಂಸ್ಕಾರ

ನಟ ವಿಜಯ ರಾಘವೇಂದ್ರ ಪತ್ನಿ ಸ್ಪಂದನಾ ಅವರ ಮೃತದೇಹ ರಾತ್ರಿ 11 ಗಂಟೆಗೆ ಬೆಂಗಳೂರಿನ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಆಗಮಿಸಲಿದೆ. ಅಲ್ಲಿಂದ ಸ್ಪಂದನಾ ಅವರ ನಿವಾಸಕ್ಕೆ ಮೃತದೇಹ ಬರಲಿದ್ದು, ಅಲ್ಲಿ ಪೂಜೆಯ ನಂತರ ಅಂತಿಮ ದರ್ಶನಕ್ಕಾಗಿ ಬೆಂಗಳೂರಿನ ಮಲ್ಲೇಶ್ವರಂ ಆಟ ಮೈದಾನದಲ್ಲಿ ವ್ಯವಸ್ಥೆ ಮಾಡಲಾಗಿದೆ ಎಂದು ಸ್ಪಂದನಾ ಚಿಕ್ಕಪ್ಪ ಬಿ.ಕೆ ಹರಿಪ್ರಸಾದ್ ತಿಳಿಸಿದ್ದಾರೆ.

ರಾತ್ರಿಯಿಂದಲೇ ಅಂತಿಮ ದರ್ಶನದ ವ್ಯವಸ್ಥೆ ಮಾಡಲಾಗಿದ್ದು, ನಾಳೆ ಮಧ್ಯಾಹ್ನ 1 ಗಂಟೆಗೆ ಬೆಂಗಳೂರಿನ ಹರಿಶ್ಚಂದ್ರ ಘಾಟ್‍ ನಲ್ಲಿ ಈಡಿಗ ಸಂಪ್ರದಾಯದಂತೆ ಅಂತಿಮ ಸಂಸ್ಕಾರ ಮಾಡಲಾಗುವುದು ಎಂದು ಬಿ.ಕೆ ಹರಿಪ್ರಸಾದ್ ಹೇಳಿದರು. ಇಂದು ಮಧ್ಯಾಹ್ನದವರೆಗೂ ಥೈಲ್ಯಾಂಡ್ ನ ದೇಶದ ಕಸ್ಟಮ್ ಕ್ಲಿಯರೆನ್ಸ್ ಪ್ರಕ್ರಿಯೆಗಳು ನಡೆಯಲಿವೆ. ತದನಂತರ ಸ್ಪಂದನಾ ಮೃತದೇಹ ಕುಟುಂಬಕ್ಕೆ ಹಸ್ತಾಂತರವಾಗಲಿದೆ.

ಕಳೆದ ಒಂದು ವಾರದಿಂದ ಸ್ಪಂದನಾ ಸೋದರ ಸಂಬಂಧಿಗಳ ಜೊತೆ ಬ್ಯಾಂಕಾಕ್ ಪ್ರವಾಸದಲ್ಲಿದ್ದರು. ಭಾನುವಾರ ಅವರಿಗೆ ಹೃದಯನೋವು ಕಾಣಿಸಿಕೊಂಡಿದೆ. ರಾತ್ರಿ ಮಲಗಿದವರು ಎದ್ದೇಳಲಿಲ್ಲ ಎನ್ನುವ ಮಾಹಿತಿಯನ್ನು ಅವರ ಕುಟುಂವಸ್ಥರು ತಿಳಿಸಿದ್ದಾರೆ. ಈ ವಿಷಯ ತಿಳಿಯುತ್ತಿದ್ದಂತೆಯೇ ಭಾನುವಾರ ರಾತ್ರಿಯೇ ವಿಜಯ ರಾಘವೇಂದ್ರ ಬ್ಯಾಂಕಾಕ್ ಗೆ ತೆರಳಿದ್ದಾರೆ.

ಭಾನುವಾರ ರಾತ್ರಿ ಬ್ಯಾಂಕಾಕ್ ಹೊರಟ ವಿಜಯ ರಾಘವೇಂದ್ರ, ಸೋಮವಾರ ಬೆಳಗ್ಗೆ ಕುಟುಂಬಕ್ಕೆ ಮಾಹಿತಿ ನೀಡಿದ್ದಾರೆ. ಸ್ಪಂದನಾ ಹೃದಯಾಘಾತದಿಂದ ನಿಧನರಾಗಿದ್ದಾರೆ ಎನ್ನುವ ಸುದ್ದಿ ತಿಳಿಯುತ್ತಿದ್ದಂತೆಯೇ ಎರಡೂ ಕುಟುಂಬ ಆಘಾತಕ್ಕೆ ಒಳಗಾಗಿದೆ. ಜೊತೆಗೆ ವಿಜಯ ರಾಘವೇಂದ್ರ ಜೊತೆ ಸಂಪರ್ಕದಲ್ಲಿದ್ದು, ಅಲ್ಲಿನ ಪ್ರಕ್ರಿಯೆಗಳನ್ನು ಮುಗಿಸಲಾಗುತ್ತಿದೆ.

Leave a Reply

You May Have Missed

error: Content is protected !!