ಪೋಲಿಸ್ ಇಲಾಖೆಯಲ್ಲಿ ಎ ಎಸ್ ಐ ಸ್ಯಾಮುವೆಲ್.ಎಂ.ಐ ನೆಲ್ಯಾಡಿ ಸೇವಾ ನಿವೃತ್ತಿ – ಸನ್ಮಾನ

ಪೋಲಿಸ್ ಇಲಾಖೆಯಲ್ಲಿ ಎ ಎಸ್ ಐ ಸ್ಯಾಮುವೆಲ್.ಎಂ.ಐ ನೆಲ್ಯಾಡಿ ಸೇವಾ ನಿವೃತ್ತಿ – ಸನ್ಮಾನ

ನೆಲ್ಯಾಡಿ: ಕರ್ನಾಟಕ ರಾಜ್ಯ ಪೋಲಿಸ್ ಇಲಾಖೆಯಲ್ಲಿ ಎ ಎಸ್ ಐ ಆಗಿ ಕರ್ತವ್ಯ ನಿರ್ವಹಿಸಿದ ಕೌಕ್ರಾಡಿ ಗ್ರಾಮದ ಹೊಸಮಜಲು ನಿವಾಸಿ ಸ್ಯಾಮುವೆಲ್ ಎಂ.ಐ ನೆಲ್ಯಾಡಿ ಅವರು ಜೂ.30ರಂದು ಕರ್ತವ್ಯದಿಂದ ನಿವೃತ್ತರಾದರು.

ಜೂನ್ 30ರಂದು ಮಂಗಳೂರಿನ ಎಸ್ ಪಿ ಕಚೇರಿಯಲ್ಲಿ ಸೇವಾ ನಿವೃತ್ತಿ ಹೊಂದಿದ ಎ ಎಸ್ ಐ ಸ್ಯಾಮುವೆಲ್.ಎಂ.ಐ ನೆಲ್ಯಾಡಿ ಅವರು ಇಲಾಖೆಗೆ ಸಲ್ಲಿಸಿದ ಪ್ರಾಮಾಣಿಕ ಸೇವೆಗಾಗಿ ದಕ್ಷಿಣ ಕನ್ನಡ ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಸಿ.ಬಿ.ರಿಷ್ಯಂತ್‌ ದಂಪತಿಗಳನ್ನು ಸನ್ಮಾನಿಸಿ ಗೌರವಿಸಿದರು.

1993 ರಿಂದ 2024ರ ವರೆಗೆ 31 ವರ್ಷಗಳ ಕಾಲ ಸೇವೆ ಸಲ್ಲಿಸಿದ ಅವರು ಮಂಗಳೂರಿನ ಸಂಚಾರಿ ಪೂರ್ವ ಪೊಲೀಸ್ ಠಾಣೆ, ಸುಬ್ರಮಣ್ಯ, ಕಡಬಗಳಲ್ಲಿ ಸೇವೆ ಸಲ್ಲಿಸಿ ಬಳಿಕ ಹೆಡ್ ಕಾನ್ ಸ್ಟೇಬಲ್ ಆಗಿ ಭಡ್ತಿ ಹೊಂದಿ ಜಿಲ್ಲಾ ಎಸ್.ಪಿ ಕಚೇರಿಯಲ್ಲಿ ಪಾಸ್ ಪೋರ್ಟ್ ಅಧಿಕಾರಿಯಾಗಿ ಕಾರ್ಯ ನಿರ್ವಹಿಸಿದ್ದರು. ನಂತರ ಧರ್ಮಸ್ಥಳ ಆರಕ್ಷಕ ಠಾಣೆಯಲ್ಲಿ ಕರ್ತವ್ಯ ನಿರ್ವಹಿಸಿ ಎ ಎಸ್ ಐ ಆಗಿ ಪುಂಜಾಲಕಟ್ಟೆ ಠಾಣೆ, ಬಳಿಕ ಕಳೆದ 3 ವರ್ಷಗಳಿಂದ ಧರ್ಮಸ್ಥಳ ಠಾಣೆಯಲ್ಲಿ ಕಾರ್ಯ ನಿರ್ವಹಿಸುತ್ತಿದ್ದರು. ವಿವಿಐಪಿ ರಿಂಗ್ ರೌಂಡ್ ಕಮಾಂಡೋ ತರಬೇತಿ ಹೊಂದಿದ್ದ ಅವರು 2013ರ ವಿಧಾನಸಭಾ ಚುನಾವಣೆಯಲ್ಲಿ ಇಂಟೆಲಿಜೆನ್ಸ್ ವಿಭಾಗದಲ್ಲಿ ನಿರ್ವಹಿಸಿದ ಸೇವೆಗೆ ಪೊಲೀಸ್ ವರಿಷ್ಟಾಧಿಕಾರಿಗಳ ವಿಶೇಷ ಪ್ರಶಂಸೆಗೆ ಭಾಜನರಾಗಿದ್ದರು.

ಜಿಲ್ಲೆಯಲ್ಲಿ ನಡೆದ ಕೆಲವು ಕಳ್ಳತನ ಪ್ರಕರಣಗಳನ್ನು ಭೇದಿಸಿ ಆಗಿನ ಎಸ್ ಪಿ ಸುಬ್ರಮಣ್ಯೇಶ್ವರ ರಾವ್ ಹಾಗೂ ಪಶ್ಚಿಮ ವಲಯ ಐಜಿಪಿ ಗೋಪಾಲ ಹೊಸೂರ್ ರವರ ವಿಶೇಷ ಪುರಸ್ಕಾರ ಪಡೆದಿದ್ದರು. ತನ್ನ ನಿಷ್ಠೆ, ಸಮಯ ಬದ್ಧತೆ ಹಾಗೂ ಪ್ರಾಮಾಣಿಕ ಸೇವೆಯಿಂದ ಇಲಾಖೆ ಹಾಗೂ ಸಾರ್ವಜನಿಕ ವಲಯದಲ್ಲಿ ಗೌರವಕ್ಕೆ ಪಾತ್ರರಾಗಿದ್ದರು.

ಪ್ರಸ್ತುತ ಪಡುಬೆಟ್ಟು ಸರಕಾರಿ ಪ್ರಾಥಮಿಕ ಶಾಲೆಯ ಮುಖ್ಯಶಿಕ್ಷಕಿ ಪತ್ನಿ ಜೆಸ್ಸಿ.ಕೆ.ಎ, ಮರ್ಚೆಂಟ್ ನೇವಿಯಲ್ಲಿ ಉದ್ಯೋಗದಲ್ಲಿರುವ ಪುತ್ರ ಅಜಯ್, ಸೊಸೆ ಸಹನಾ, ಪುತ್ರಿ ಅನನ್ಯ ಅವರೊಂದಿಗೆ ಹೊಸಮಜಲಿನಲ್ಲಿ ವಾಸ್ತವ್ಯ ಹೊಂದಿದ್ದಾರೆ.

Leave a Reply

You May Have Missed

error: Content is protected !!