ನೆಲ್ಯಾಡಿ: ಮಂಗಳೂರು ವಿವಿ ಅಂತರ್‌ಕಾಲೇಜು ಪುರುಷರ ವಾಲಿಬಾಲ್, ಮಹಿಳೆಯರ ತ್ರೋಬಾಲ್ ಪಂದ್ಯಾಟ

ನೆಲ್ಯಾಡಿ: ಮಂಗಳೂರು ವಿವಿ ಅಂತರ್‌ಕಾಲೇಜು ಪುರುಷರ ವಾಲಿಬಾಲ್, ಮಹಿಳೆಯರ ತ್ರೋಬಾಲ್ ಪಂದ್ಯಾಟ

ಮಂಗಳೂರು ವಿವಿಗೆ ಜಾಗ ಅಧಿಕೃತಗೊಂಡ 15 ದಿನದೊಳಗೆ ಆಂತರಿಕ ಸಂಪನ್ಮೂಲ ಬಿಡುಗಡೆಗೆ ಮಾಡುತ್ತೇನೆ                                                                                                                                                        – ಪ್ರೊ.ಪಿ.ಎಸ್.ಯಡಪಡಿತ್ತಾಯ

ನೇಸರ ಮಾ.21: ಮಂಗಳೂರು ವಿಶ್ವವಿದ್ಯಾನಿಲಯ ಘಟಕ ಕಾಲೇಜು ನೆಲ್ಯಾಡಿ ಇದರ ಆಶ್ರಯದಲ್ಲಿ ಅಜಾದಿ ಕಾ ಅಮೃತ್ ಮಹೋತ್ಸವ-75ನೇ ಸ್ವಾತಂತ್ರ್ಯ ಮಹೋತ್ಸವದ ಅಂಗವಾಗಿ ಮಂಗಳೂರು ವಿಶ್ವವಿದ್ಯಾನಿಲಯದ ಅಂತರ್ ಕಾಲೇಜು ಮಟ್ಟದ ಪುರುಷರ ವಾಲಿಬಾಲ್ ಹಾಗೂ ಮಹಿಳೆಯರ ತ್ರೋಬಾಲ್ ಪಂದ್ಯಾಕೂಟ ಮಾ.21ರಂದು ನೆಲ್ಯಾಡಿ ಗಾಂಧಿ ಮೈದಾನದಲ್ಲಿ ನಡೆಯಿತು.

ನೆಲ್ಯಾಡಿ ಪೇಟೆಯಿಂದ ನಡೆದ ಎನ್ ಸಿ ಸಿ, ನೇವಿ ಕ್ರೆಡಿಟ್ ವಿದ್ಯಾರ್ಥಿಗಳ ಪಥಸಂಚಲನವನ್ನು ನಿವೃತ್ತ ದೈಹಿಕ ಶಿಕ್ಷಣ ಶಿಕ್ಷಕ ಉಲಹನ್ನನ್‌ರವರು ಉದ್ಘಾಟಿಸಿದರು.

ಕ್ರೀಡಾಕೂಟವನ್ನು ದೀಪ ಬೆಳಗಿಸುವುದರ ಮೂಲಕ ಉದ್ಘಾಟನೆಗೊಳಿಸಿ, ಸಮಾರಂಭದ ಅಧ್ಯಕ್ಷತೆ ವಹಿಸಿದ್ದ ಮಂಗಳೂರು ವಿವಿ ಕುಲಪತಿ ಪ್ರೊಫೆಸರ್ ಪಿ.ಎಸ್.ಯಡಪಡಿತ್ತಾಯರವರು ಮಾತನಾಡಿ, ವಿದ್ಯಾರ್ಥಿಗಳು ತಮ್ಮ ಕಲಿಕೆಯೊಂದಿಗೆ ಕ್ರೀಡೆಯಲ್ಲಿ ಪಾಲ್ಗೊಳ್ಳುವುದರಿಂದ ಶಾರೀರಿಕ, ಮಾನಸಿಕ, ಬೌದ್ಧಿಕ, ಅಧ್ಯಾತ್ಮಿಕ, ಧಾರ್ಮಿಕವಾಗಿ ಬೆಳೆಯಲು ಸಾಧ್ಯ. ಮಂಗಳೂರು ವಿವಿ ನೆಲ್ಯಾಡಿ ಘಟಕ ಕಾಲೇಜಿಗೆ ನೆಲ್ಯಾಡಿಯಲ್ಲಿ 24 ಎಕ್ರೆ ಜಾಗ ಕಾದಿರಿಸಲಾಗಿದ್ದು ಆರ್‌ಟಿಸಿ ಆಗಿದ್ದರು, ಕೆಲವು ತಕರಾರುಗಳು ಇರುವುದರಿಂದ ಅವುಗಳನ್ನು ಸಹಾಯಕ ಆಯುಕ್ತರು, ಜಿಲ್ಲಾಧಿಕಾರಿಯವರ ಜೊತೆಗೆ ಆದಷ್ಟು ಬೇಗ ಮಾತುಕತೆ ನಡೆಸಿ ಬಗೆಹರಿಸುತ್ತೇನೆ. ಮಂಗಳೂರು ವಿವಿಗೆ ಜಾಗ ಅಧಿಕೃತಗೊಂಡ 15 ದಿನ ದೊಳಗೆ ಆಂತರಿಕ ಸಂಪನ್ಮೂಲ ಬಿಡುಗಡೆಗೆ ಮಾಡುತ್ತೇನೆ. ಜಾಗದ ಸಂರಕ್ಷಣೆ ನಮ್ಮ ಜವಾಬ್ದಾರಿಯಾಗಿದೆ, ಜಾಗಕ್ಕೆ ಆವರಣ ಗೋಡೆ ನಿರ್ಮಾಣ ಮಾಡುತ್ತೇವೆ ಎಂದು ಹೇಳಿದರು. ನೆಲ್ಯಾಡಿ ಘಟಕ ಕಾಲೇಜಿನ ಅನುಷ್ಠಾನ ಸಮಿತಿ ಅಧ್ಯಕ್ಷೆಯಾಗಿರುವ ಉಷಾ ಅಂಚನ್‌ರವರು ಧೈರ್ಯಶಾಲಿ, ಹಿಡಿದ ಕೆಲಸ ಸಾಧಿಸಬೇಕೆಂಬ ಹಠವೂ ಇದೆ. ನೆಲ್ಯಾಡಿ ಘಟಕ ಕಾಲೇಜು ಉಳಿಸಿಕೊಳ್ಳುವ ನಿಟ್ಟಿನಲ್ಲಿ ಹೋರಾಟಕ್ಕೆ ಎಲ್ಲರೂ ಪಕ್ಷಾತೀತವಾಗಿ ಕೈಜೋಡಿಸಬೇಕೆಂದು ಹೇಳಿದರು. ವೃತ್ತಿಪರ ಕೋರ್ಸು ಆರಂಭಿಸಲು ಸಿದ್ಧರಿದ್ದೇವೆ ಎಂದರು.

ಮುಖ್ಯ ಅತಿಥಿ ಪುತ್ತೂರು ಭೂ ಅಭಿವೃದ್ಧಿ ಬ್ಯಾಂಕ್‌ನ ಅಧ್ಯಕ್ಷ ಭಾಸ್ಕರ ಎಸ್.ಗೌಡ ಮಾತನಾಡಿ, ಕ್ರೀಡೆಗಳು ಇರುವುದು ಸಂಘಟನೆಗಾಗಿ, ಸಂಘರ್ಷಗಳಿಗಲ್ಲ, ನಾವೆಲ್ಲರೂ ಒಂದೇ ಎಂಬ ಭಾವನೆಯಿಂದ ಆಡಬೇಕು ಎಂದರು. ನೆಲ್ಯಾಡಿ ಘಟಕ ಕಾಲೇಜು ಉಳಿಸಿಕೊಳ್ಳುವ ನಿಟ್ಟಿನಲ್ಲಿ ಎಲ್ಲರೂ ಪಕ್ಷಾತೀತವಾಗಿ ಪ್ರಯತ್ನಿಸೋಣ ಎಂದರು.
ನೆಲ್ಯಾಡಿ ಘಟಕ ಕಾಲೇಜಿಗೆ ಆರಂಭದ ಎರಡು ವರ್ಷ ತರಗತಿ ನಡೆಸಲು ಅವಕಾಶ ನೀಡಿದ ನೆಲ್ಯಾಡಿ ಸಂತಜಾರ್ಜ್ ವಿದ್ಯಾಸಂಸ್ಥೆಯ ಸಂಚಾಲಕ ಅಬ್ರಹಾಂ ವರ್ಗೀಸ್‌ರವರನ್ನು ಈ ಸಂದರ್ಭದಲ್ಲಿ ಸಮಾರಂಭದಲ್ಲಿ ಸನ್ಮಾನಿಸಲಾಯಿತು.

ಘಟಕ ಕಾಲೇಜು ಅನುಷ್ಠಾನ ಸಮಿತಿ ಅಧ್ಯಕ್ಷೆ ಉಷಾ ಅಂಚನ್‌ರವರು ಮಾತನಾಡಿ, ನೆಲ್ಯಾಡಿ ಘಟಕ ಕಾಲೇಜಿಗೆ 24ಎಕ್ರೆ ಜಾಗ ಕಾದಿರಿಸ ಲಾಗಿದ್ದು ಇದನ್ನು ಉಳಿಸಿಕೊಳ್ಳುವ ನಿಟ್ಟಿನಲ್ಲಿ ಸೂಕ್ತ ಕ್ರಮ ಕೈಗೊಳ್ಳಬೇಕೆಂದು ಹೇಳಿದರು. ಮಂಗಳೂರು ವಿವಿ ನೆಲ್ಯಾಡಿ ಘಟಕ ಕಾಲೇಜಿನ ಮೂಲಕ ನೆಲ್ಯಾಡಿಯ ಹೆಸರು ರಾಷ್ಟ್ರ ಮಟ್ಟದಲ್ಲಿ ಪಸರಿಸಬೇಕು. ಇಲ್ಲಿ ವೃತ್ತಿಪರ ಕೋರ್ಸು ಆರಂಭಿಸಬೇಕು. ಕಾಲೇಜಿಗೆ ಮೂಲಭೂತ ಸೌಕರ್ಯ ಒದಗಿಸಿಕೊಡಬೇಕೆಂದು ಕುಲಪತಿಯವರಲ್ಲಿ ವಿನಂತಿಸಿದರು. ನೆಲ್ಯಾಡಿ ಘಟಕ ಕಾಲೇಜಿನ ಮೊದಲ ಸಂಯೋಜಕ ಯತೀಶ್ ಕುಮಾರ್, ಶಿಕ್ಷಕ ರಕ್ಷಕ ಸಂಘದ ಉಪಾಧ್ಯಕ್ಷ ಅಬ್ದುಲ್ ಖಾದರ್, ನೆಲ್ಯಾಡಿ ಗ್ರಾಮ ಪಂಚಾಯತ್ ಉಪಾಧ್ಯಕ್ಷ ಅಬ್ದುಲ್ ಜಬ್ಬಾರ್, ಉಲಹನ್ನನ್‌ ವೇದಿಕೆಯಲ್ಲಿ ಉಪಸ್ಥಿತರಿದ್ದರು. ವಿದ್ಯಾರ್ಥಿಗಳಾದ ಶುಭ ಮತ್ತು ಬಳಗದವರು ಮಂಗಳೂರು ವಿವಿಯ ಗೀತೆ ಹಾಡಿದರು. ಮಂಗಳೂರು ವಿಶ್ವವಿದ್ಯಾನಿಲಯದ ನೆಲ್ಯಾಡಿ ಘಟಕ ಕಾಲೇಜಿನ ಸಂಯೋಜಕ ಡಾ.ಜಯರಾಜ್ ಎನ್. ಸ್ವಾಗತಿಸಿದರು. ಉಪನ್ಯಾಸಕ ನೂರಂದಪ್ಪ ವಂದಿಸಿದರು. ಚಂದ್ರಕಲಾ ಕಾರ್ಯಕ್ರಮ ನಿರೂಪಿಸಿದರು. ಜಿ.ಪಂ.ಮಾಜಿ ಸದಸ್ಯರಾದ ಪಿ.ಪಿ.ವರ್ಗೀಸ್, ಸರ್ವೋತ್ತಮ ಗೌಡ, ಕೆಪಿಸಿಸಿ ಸಂಯೋಜಕ ಕೃಷ್ಣಪ್ಪ, ಕೆ.ಪಿ.ತೋಮಸ್, ನೆಲ್ಯಾಡಿ ಘಟಕ ಕಾಲೇಜು ಅನುಷ್ಠಾನ ಸಮಿತಿ ಕಾರ್ಯದರ್ಶಿ ಶಿವಪ್ರಸಾದ್, ನಿವೃತ್ತ ಮುಖ್ಯಶಿಕ್ಷಕ ರವೀಂದ್ರ ಟಿ., ನೆಲ್ಯಾಡಿ ಗ್ರಾ.ಪಂ.ಅಧ್ಯಕ್ಷೆ ಚೇತನಾ, ಸದಸ್ಯರಾದ ರೇಷ್ಮಾಶಶಿ, ರವಿಚಂದ್ರ ಹೊಸವೊಕ್ಲು, ಶಿಕ್ಷಕ ರಕ್ಷಕ ಸಂಘದ ಸದಸ್ಯರುಗಳಾದ ಶ್ರೀಮತಿ ಪರಮೇಶ್ವರಿ, ಶ್ರೀಮತಿ ದಿವ್ಯ, ಶ್ರೀಮತಿ ರಾಜೇಶ್ವರಿ ಮತ್ತಿತರರು ಉಪಸ್ಥಿತರಿದ್ದರು. ಬಳಿಕ ವಿಶ್ವವಿದ್ಯಾನಿಲಯದ ಅಂತರ್ ಕಾಲೇಜು ಮಟ್ಟದ ಮಹಿಳೆಯರ ತ್ರೋಬಾಲ್ ಹಾಗೂ ಪುರುಷರ ವಾಲಿಬಾಲ್ ಪಂದ್ಯಾಟ ನಡೆಯಿತು.

ಸಮಾರೋಪ ಸಮಾರಂಭ:

ಮುಖ್ಯ ಅತಿಥಿ ಸ್ಥಾನದಿಂದ ಮಾತನಾಡಿದ ಯು ಪಿ ವರ್ಗೀಸ್ ಎಲೈಟ್ ರಬ್ಬರ್ ಇಂಡಸ್ಟ್ರೀಸ್ ನೆಲ್ಯಾಡಿ ಯವರು ವಿಶ್ವವಿದ್ಯಾನಿಲಯ ಘಟಕ ಕಾಲೇಜು ನೆಲ್ಯಾಡಿಯಲ್ಲಿ ಆರಂಭವಾದದ್ದು ಅತಿ ಸಂತೋಷದಾಯಕವಾಗಿದೆ, ಇಲ್ಲಿ ಹೊಸ ಹೊಸ ವೃತ್ತಿಪರ ಕೋರ್ಸುಗಳನ್ನು ಆರಂಭಿಸುವುದ ರ ಮೂಲಕ ವಿದ್ಯಾರ್ಥಿಗಳಿಗೆ ಅನುಕೂಲವಾಗಲಿ, ವಿಶ್ವವಿದ್ಯಾನಿಲಯಕ್ಕೆ ಹೊಸ ಕಟ್ಟಡ ಆಗುವವರೆಗೆ, ಕಟ್ಟಡದ ಸಮಸ್ಯೆ ಇದ್ದಲ್ಲಿ ಕಾಲೇಜು ನಡೆಸಲು ಕೊಠಡಿಗಳನ್ನು ಉಚಿತವಾಗಿ ನೀಡುವುದಾಗಿ ಈ ಸಂದರ್ಭದಲ್ಲಿ ಹೇಳಿದರು. ಅಲ್ಲದೆ ಮುಂದಿನ ದಿನಗಳಲ್ಲಿ ಪೂರ್ಣ ಸಹಕಾರ ವನ್ನು ನೀಡುವುದಾಗಿ ತಿಳಿಸಿದರು ಹಾಗೂ ಇಂದಿನ ಕ್ರೀಡಾಕೂಟದ ಎಲ್ಲಾ ಬಹುಮಾನಗಳ ಪ್ರಯೋಜಕತ್ವವನ್ನು ನೀಡಿ, ಶುಭ ಹಾರೈಸಿದರು.

ಅತಿಥಿಗಳಾಗಿ ನೆಲ್ಯಾಡಿ ಗ್ರಾಮ ಪಂಚಾಯತಿನ ಅಧ್ಯಕ್ಷರಾದ ಶ್ರೀಮತಿ ಚೇತನಾ, ಮುಖ್ಯ ಅತಿಥಿಗಳಾದ ರಫೀಕ್ ಸೀಗಲ್, ಅಧ್ಯಕ್ಷರು ವರ್ತಕರ ಸಂಘ ನೆಲ್ಯಾಡಿ, ವಿಮಲ್ ಕುಮಾರ್, ಅಧ್ಯಕ್ಷರು ಸರಕಾರಿ ನೌಕರರ ಸಂಘ ಕಡಬ, ನೆಲ್ಯಾಡಿ ಘಟಕ ಕಾಲೇಜಿನ ಅನುಷ್ಠಾನ ಸಮಿತಿ ಅಧ್ಯಕ್ಷೆ ಉಷಾ ಅಂಚನ್, ನೆಲ್ಯಾಡಿ ಘಟಕ ಕಾಲೇಜಿನ ಮೊದಲ ಸಂಯೋಜಕರಾದ ಯತೀಶ್ ಕುಮಾರ್, ಶಿಕ್ಷಕ ರಕ್ಷಕ ಸಂಘದ ಕಾರ್ಯಾಧ್ಯಕ್ಷರಾದ ಅಬ್ದುಲ್ ರಜಾಕ್ ಕೆಮ್ಮಾನ್.ಎ, ಶಿಕ್ಷಕ ರಕ್ಷಕ ಸಂಘದ ಕಾರ್ಯದರ್ಶಿ ಅಬ್ದುಲ್ ರಜಾಕ್, ಸಹಕಾರ್ಯದರ್ಶಿ ನವೀನ್, ಕಾಲೇಜಿನ ಸಂಯೋಜಕ ಡಾ.ಜಯರಾಜ್ ಎನ್, ಕಾಲೇಜು ನಾಯಕ ರುಕ್ಮನ್, ಕ್ರೀಡಾ ಕಾರ್ಯದರ್ಶಿ ಗುರುಪ್ರದೀಪ್ ವೇದಿಕೆಯಲ್ಲಿ ಉಪಸ್ಥಿತರಿದ್ದರು.

ಕ್ರೀಡಾಕೂಟಕ್ಕೆ ಸಹಕರಿಸಿದ ದೈಹಿಕ ಶಿಕ್ಷಕರಾದ ಗೋಪಿನಾಥ ಇಂದ್ರಪ್ರಸ್ಥ ಕಾಲೇಜು ಉಪ್ಪಿನಂಗಡಿ, ಪೂರ್ಣಿಮ ವಿದ್ಯಾರಶ್ಮಿ ಕಾಲೇಜು ಸವಣೂರು, ಮೋನಪ್ಪ ಪಟ್ಟೆ, ಯತೀಶ್ ಕುಮಾರ್ ಪುತ್ತೂರು ವಿವೇಕಾನಂದ ಕಾಲೇಜು, ದಿವಾಕರ ಶೆಟ್ಟಿ ಮಂಗಳೂರು ವಿಶ್ವವಿದ್ಯಾನಿಲಯ ಕಾಲೇಜು ಕೊಣಾಜೆ, ರಘುನಾಥ ಸಾಲೆತ್ತೂರು, ಮನೋಹರ್, ಮೋನಪ್ಪ ಇವರಿಗೆ ನೆನಪಿನ ಕಾಣಿಕೆ ನೀಡಲಾಯಿತು. ಉಪನ್ಯಾಸಕರಾದ ಸೀತಾರಾಮ ಸ್ವಾಗತಿಸಿ. ಡಾ.ನೂರಂದಪ್ಪ ಧನ್ಯವಾದ ನೀಡಿದರು. ಉಪನ್ಯಾಸಕಿ ಡೀನಾ ಕಾರ್ಯಕ್ರಮ ನಿರೂಪಿಸಿದರು.

ಕ್ರೀಡಾಕೂಟದ ವಿಜೇತರು:

ಮಹಿಳೆಯರ ತ್ರೋಬಾಲ್ ಪಂದ್ಯಾಟ ದಲ್ಲಿ
ಪ್ರಥಮ : ಮಂಗಳೂರು ವಿಶ್ವವಿದ್ಯಾನಿಲಯ ಕಾಲೇಜು ಹಂಪನಕಟ್ಟೆ
ದ್ವಿತೀಯ : SCR ಕಾಲೇಜು ಕಕ್ಕೆಪದವು
ತೃತೀಯ : ಶ್ರೀ ಭುವನೇಂದ್ರ ಕಾಲೇಜು ಕಾರ್ಕಳ
ಚತುರ್ಥ : ಮಂಗಳೂರು ವಿಶ್ವವಿದ್ಯಾನಿಲಯ ಸಂಜೆ ಕಾಲೇಜು ಮಂಗಳೂರು.
ಪುರುಷರ ವಾಲಿಬಾಲ್ ಪಂದ್ಯಾಟ
ಪ್ರಥಮ : ಎಂಪಿಎಂ ಕಾಲೇಜು ಕಾರ್ಕಳ
ದ್ವಿತೀಯ : ಶ್ರೀ ಭುವನೇಂದ್ರ ಕಾಲೇಜು ಕಾರ್ಕಳ
ತೃತೀಯ : ಸರಕಾರಿ ಪದವಿ ಕಾಲೇಜು ಪುಂಜಾಲಕಟ್ಟೆ
ಚತುರ್ಥ : ಮಂಗಳೂರು ವಿಶ್ವವಿದ್ಯಾನಿಲಯ ಕಾಲೇಜು ಹಂಪನಕಟ್ಟೆ

ವೀಕ್ಷಿಸಿ Subscribers ಮಾಡಿ
Previous post

ನೆಲ್ಯಾಡಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘ (ನಿ), ಕಾರ್ಬನ್ ಫೈಬರ್ ದೋಟಿ ಮೂಲಕ ಅಡಿಕೆ ಕೊಯ್ಲು ಮತ್ತು ಔಷಧ ಸಿಂಪಡನೆ ತರಬೇತಿ

Next post

ನೆಲ್ಯಾಡಿ: ಸಪಿಯೆನ್ಶಿಯ ಬೆಥನಿ ಪ್ರಥಮ ದರ್ಜೆ ಕಾಲೇಜಿಗೆ ಮಂಗಳೂರು ವಿಶ್ವವಿದ್ಯಾನಿಲಯದ ಕುಲಪತಿಗಳ ಭೇಟಿ

Leave a Reply

You May Have Missed

error: Content is protected !!