ಬೆಳೆ ವಿಮೆ ಪ್ರಿಮಿಯಂ ಪಾವತಿಯಲ್ಲಿ ದ.ಕ ನಂಬರ್ ವನ್

ಬೆಳೆ ವಿಮೆ ಪ್ರಿಮಿಯಂ ಪಾವತಿಯಲ್ಲಿ ದ.ಕ ನಂಬರ್ ವನ್

ನೇಸರ ಜು.21: ಹವಾಮಾನ ಆಧರಿತ ಬೆಳೆವಿಮೆಗೆ ದ.ಕ. ಜಿಲ್ಲೆಯಿಂದ 1,18,032 ಕೃಷಿಕರು ಅರ್ಜಿ ಸಲ್ಲಿಸಿದ್ದು ಜಿಲ್ಲೆಯು ನಂಬರ್ ವನ್ ಸ್ಥಾನವನ್ನು ಪಡೆದಿದೆ.
ಬೆಳೆ ವಿಮೆಯ ಪ್ರಯೋಜನದ ಕುರಿತು ಮಾಹಿತಿ ಹೊಂದಿರುವ ಜಿಲ್ಲೆಯ ಹೆಚ್ಚಿನ ಕೃಷಿಕರು ಈ ಬಾರಿ ಅರ್ಜಿ ಸಲ್ಲಿಸಿದ್ದಾರೆ.

ಜುಲೈ 1 ರಿಂದ ಜೂನ್ 30ರ ವರೆಗಿನ ಅವಧಿಯ ಬೆಳೆ ವಿಮೆ ಯೋಜನೆ ದ.ಕ. ಜಿಲ್ಲೆಯಲ್ಲಿ ಅಡಕೆ ಹಾಗೂ ಕಾಳುಮೆಣಸಿಗೆ ಅನ್ವಯಿಸುತ್ತದೆ. ಸ್ಥಳೀಯ ಸಹಕಾರಿ ಸಂಘ, ಬ್ಯಾಂಕುಗಳು ಬೆಳೆ ವಿಮೆಯ ಪ್ರೀಮಿಯಂನ್ನು ತನ್ನ ಗ್ರಾಹಕರಿಂದ ಸಂಗ್ರಹಿಸಿ ತೋಟಗಾರಿಕೆ ಇಲಾಖೆಯ ಮೂಲಕ ಇನ್ಸೂರೆನ್ಸ್ ಕಂಪನಿಗೆ ಪಾವತಿಸುತ್ತದೆ.
ಸರಕಾರ ಹಾಗೂ ಇನ್ಸೂರೆನ್ಸ್ ಕಂಪೆನಿಗಳು ನಿಗದಿಪಡಿಸಿದ ಅವಧಿಯಲ್ಲಿ ಸುರಿದ ಮಳೆಯ ಪ್ರಮಾಣದ ಆಧಾರದಲ್ಲಿ ವಿಮಾ ಮೊತ್ತವನ್ನು ರೈತರಿಗೆ ಪಾವತಿಸುತ್ತವೆ.
ಅಡಕೆಗೆ ಹೆಕ್ಟೇರ್ ಗೆ ರೂ.6,475 ಪ್ರೀಮಿಯಂ ಇದ್ದು, ಗರಿಷ್ಠ ರೂ. 1,28,000 ಹಾಗೂ ಕಾಳು ಮೆಣಸಿಗೆ ಹೆಕ್ಟೇರ್ ಗೆ ರೂ. 2,350 ಪ್ರೀಮಿಯಂ ಇದ್ದು ರೂ. 47,000ದ ತನಕ ಗರಿಷ್ಠ ವಿಮಾ ಮೊತ್ತ ಲಭಿಸುತ್ತದೆ. ಆಯಾಯ ಪ್ರದೇಶಗಳಲ್ಲಿ ಹವಾಮಾನ ವೈಪರಿತ್ಯದಿಂದ ಉಂಟಾಗುವ ನಷ್ಟದ ಆಧಾರದಲ್ಲಿ ಪರಿಹಾರ ಬಿಡುಗಡೆಗೊಳ್ಳುತ್ತದೆ.

ನವೆಂಬರ್ ನಲ್ಲಿ ಜಮೆ:
ಕಳೆದ ವರ್ಷ ಕಂತು ಪಾವತಿಸಿದ ರೈತರಿಗೆ ಸಾಮಾನ್ಯವಾಗಿ ನವೆಂಬರ್ ಬಳಿಕ ವಿಮಾ ಮೊತ್ತ ಬ್ಯಾಂಕ್ ಖಾತೆಗೆ ಜಮಯಾಗುತ್ತದೆ. 2021-22 ನೇ ಸಾಲಿನಲ್ಲಿ ಕಂತು ಕಟ್ಟಿದವರಿಗೆ ಇನ್ನಷ್ಟೇ ಮೊತ್ತ ಜಮೆಯಾಗಬೇಕಾಗಿದೆ. ಈ ಬಾರಿ ಕಟ್ಟಿದ ಕಂತು ಮುಂದಿನ ನವೆಂಬರ್ ತಿಂಗಳ ಆಸುಪಾಸು ಜಮೆಯಾಗುತ್ತದೆ. ಬೆಳೆ ವಿಮೆ ಯೋಜನೆಯಲ್ಲಿ ಉತ್ತಮ ಮಟ್ಟದ ಪರಿಹಾರ, ತೋಟಗಾರಿಕೆ, ಸಹಕಾರಿ ಸಂಘಗಳ ಮೂಲಕ ನೀಡಲಾಗುವ ಪ್ರೋತ್ಸಾಹದಿಂದ ವರ್ಷದಿಂದ ವರ್ಷಕ್ಕೆ ಹೆಚ್ಚಿನ ರೈತರು ಈ ಯೋಜನೆಯತ್ತ ಆಕರ್ಷಿತರಾಗುತ್ತಿದ್ದಾರೆ. ಕೆಲವೊಂದು ರೈತರು ಇಲಾಖೆಗಳ ತಾಂತ್ರಿಕ ಎಡವಟ್ಟುಗಳಿಂದ ಬೆಳೆ ವಿಮೆ ಮೊತ್ತ ಪಡೆಯಲು ಹರಸಾಹಸ ನಡೆಸಬೇಕಾದ ನಿದರ್ಶನಗಳು ಇವೆ.

ದ.ಕ.ಪ್ರಥಮ:
ದ.ಕ.ಜಿಲ್ಲೆ ಬೆಳೆ ವಿಮೆ ಪಾವತಿಗೆ ಹೆಚ್ಚಿನ ಒಲವು ತೋರಿಸಿದ್ದು 1,18,032 ರೈತರು ಪ್ರೀಮಿಯಂ ಪಾವತಿ ಸಿದ್ದು ಪ್ರಥಮ ಸ್ಥಾನವನ್ನು ಪಡೆದಿದೆ. ಈ ಬಾರಿ ಜಿಲ್ಲೆಯಲ್ಲಿ ಭಾರಿ ಮಳೆ ಸುರಿಯುತ್ತಿದ್ದು ಹಲವು ಅವಾಂತರಗಳು ಸೃಷ್ಟಿಯಾಗಿದ್ದು ಮುಂದಿನ ವರ್ಷ ಉತ್ತಮ ಮಟ್ಟದ ಪರಿಹಾರ ದೊರಕುವ ನಿರೀಕ್ಷೆ ಇದೆ.

ತೆಂಗು,ರಬ್ಬರ್, ಕೊಕ್ಕೋ ಗು ಸಿಗಲಿ:
ಜಿಲ್ಲೆಯಲ್ಲಿ ತೆಂಗು, ರಬ್ಬರ್, ಕೊಕ್ಕೋ ಕೂಡ ಮುಖ್ಯ ಬೆಳೆಯಾಗಿದೆ. ಆದರೆ ಸರಕಾರ ಈ ಬೆಳೆಗಳಿಗೆ ಬೆಳೆ ವಿಮೆ ಸೌಲಭ್ಯವನ್ನು ನೀಡಿಲ್ಲ. ಈ ಬೆಳೆಗಳು ಪ್ರಾಕೃತಿಕ ವಿಕೋಪಕ್ಕೆ ಬಲಿಯಾಗುತ್ತಿದ್ದು ಇವುಗಳಿಗೆ ಬೆಳೆ ವಿಮೆ ಸೌಲಭ್ಯ ನೀಡಬೇಕೆಂಬುದು ರೈತರ ಆಗ್ರಹವಾಗಿದೆ.

Leave a Reply

You May Have Missed

error: Content is protected !!