ಸಂತ ಜಾರ್ಜ್ ವಿದ್ಯಾ ಸಂಸ್ಥೆಯಲ್ಲಿ ಮಕ್ಕಳ ದಿನಾಚರಣೆ, ಮೆಟ್ರಿಕ್ ಮೇಳ, ವಿಜ್ಞಾನ ಮತ್ತು ಪ್ರಾಚ್ಯ ವಸ್ತು ಪ್ರದರ್ಶನ

ನೆಲ್ಯಾಡಿ : ಇಲ್ಲಿನ ಸಂತ ಜಾರ್ಜ್ ವಿದ್ಯಾಸಂಸ್ಥೆಯಲ್ಲಿ ಮಕ್ಕಳ ದಿನಾಚರಣೆಯನ್ನು ವಿದ್ಯಾ ಸಂಸ್ಥೆಯ ಸಂಚಾಲಕರಾದ ಅಬ್ರಹಾಂ ವರ್ಗಿಸ್ ನೆಹರು ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಆಚರಿಸಲಾಯಿತು.

ಬಳಿಕ ವಿದ್ಯಾರ್ಥಿಗಳ ಸೃಜನಶೀಲತೆ ಮತ್ತು ಕೌಶಲ್ಯ ವರ್ಧನೆಗೆ ಪೂರಕವಾಗಿ ಮೆಟ್ರಿಕ್ ಮೇಳ, ವಿಜ್ಞಾನ ಮತ್ತು ಪ್ರಾಚ್ಯ ವಸ್ತುಗಳ ಪ್ರದರ್ಶನ ನಡೆಯಿತು.
ಮೆಟ್ರಿಕ್ ಮೇಳವನ್ನು ನೆಲ್ಯಾಡಿ ವರ್ತಕರ ಸಂಘದ ಅಧ್ಯಕ್ಷ ರಫೀಕ್ ಸಿಗಲ್ ಉದ್ಘಾಟಿಸಿ ವಿದ್ಯಾರ್ಥಿಗಳ ಸ್ವಾವಲಂಬಿ ಬದುಕಿಗೆ ಈ ಮೇಳ ಸಹಕಾರಿಯಾಗಲಿ ಎಂದರು.

ವಿದ್ಯಾರ್ಥಿಗಳೇ ತಯಾರಿಸಿ ಪ್ರದರ್ಶನಕ್ಕೆ ಇಟ್ಟ ವಿಜ್ಞಾನ ಮಾದರಿಗಳ ವಸ್ತು ಪ್ರದರ್ಶನವನ್ನು ನೆಲ್ಯಾಡಿಯ ಶಿಲ್ಪ ಕನ್ಸ್ಟ್ರಕ್ಷನ್ ಮಾಲಕ ಶಿವಣ್ಣ ಹೆಗಡೆಯವರು ಉದ್ಘಾಟಿಸಿ ಹಾರೈಸಿದರು.

ಪ್ರಾಚ್ಯ ವಸ್ತುಗಳ ಪ್ರದರ್ಶನ ಮಳಿಗೆಯನ್ನು ಉದ್ಘಾಟಿಸಿದ ಅಬ್ರಾಹಾಂ ವರ್ಗಿಸ್ ರವರು ಮಾತನಾಡಿ ಮರೆಯಾಗುತ್ತಿರುವ ಸಾಂಪ್ರದಾಯಿಕ ಪರಿಕರಗಳು ಮುಂದಿನ ಪೀಳಿಗೆಗೆ ಇತಿಹಾಸವನ್ನು ಮೆಲುಕು ಹಾಕುವ ವಸ್ತುಗಳಾಗಬೇಕು, ಅವುಗಳನ್ನು ಜೋಪಾನವಾಗಿ ರಕ್ಷಿಸುವ ಕೆಲಸವಾಗ ಬೇಕೆಂದರು.
ಈ ಸಂದರ್ಭದಲ್ಲಿ ಸಂಸ್ಥೆಯ ನಿವೃತ್ತ ಮುಖ್ಯ ಶಿಕ್ಷಕ ಆರ್.ವೆಂಕಟರಮಣ, ಸಂಸ್ಥೆಯ ಪ್ರಾಚಾರ್ಯರಾದ ಎಂ.ಕೆ. ಏಲಿಯಾಸ್, ಮುಖ್ಯಗುರುಗಳಾದ ಎಂ.ಐ. ತೋಮಸ್, ಹರಿಪ್ರಸಾದ್ ಹಾಗೂ ಶಿಕ್ಷಕ ವೃಂದದವರು ಉಪಸ್ಥಿತರಿದ್ದರು.
ವಿದ್ಯಾರ್ಥಿಗಳ ಸುಮಾರು 29 ವಿವಿಧ ಸ್ಟಾಲ್ ಗಳು ಗಮನ ಸೆಳೆದವು. ನೆಲ್ಯಾಡಿಯ ಸುತ್ತಮುತ್ತಲಿನ ಶಾಲಾವಿದ್ಯಾರ್ಥಿಗಳು ವಸ್ತು ಪ್ರದರ್ಶನವನ್ನು ವೀಕ್ಷಿಸಿದರು. ಮೆಟ್ರಿಕ್ ಮೇಳದಲ್ಲಿ ವಿದ್ಯಾರ್ಥಿಗಳ ಸ್ಟಾಲ್ ನಲ್ಲಿ ಭರ್ಜರಿ ವ್ಯಾಪಾರ ನಡೆಯಿತು.




















Leave a Reply