ಮುನ್ನೆಚ್ಚರಿಕೆ ಕೈಗೊಳ್ಳದೆ ಸಾರ್ವಜನಿಕರಿಗೆ ನೆಲ್ಯಾಡಿಯಲ್ಲಿ ಅಪಾಯವನ್ನು ತಂದೊಡುತ್ತಿದೆಯೇ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ?






ನೆಲ್ಯಾಡಿ ರಾಷ್ಟ್ರೀಯ ಹೆದ್ದಾರಿಯ ಕಾಮಗಾರಿ ಭರದಿಂದ ಸಾಗುತ್ತಿದ್ದು ಅಲ್ಲಲ್ಲಿ ರಸ್ತೆ ಅಗೆತೆಗಳು ಮತ್ತು ಕಾಮಗಾರಿ ಗುಂಡಿಗಳಿಂದ ವಾಹನ ಚಾಲಕರು ಬಹಳ ಎಚ್ಚರಿಕೆಯಿಂದ ಸಾಗಬೇಕಾಗಿದೆ. ಕೊಕ್ಕಡ ಮತ್ತು ನೆಲ್ಯಾಡಿ ಸಂಪರ್ಕ ರಸ್ತೆ ಹೆದ್ದಾರಿಗೆ ಸೇರುವಲ್ಲಿ ಕಾಮಗಾರಿ ನಡೆಯುತ್ತಿರುವುದರಿಂದ ಹೆದ್ದಾರಿಯನ್ನು ಸಂಪರ್ಕಿಸಲು ನಿರ್ಮಿಸಿರುವ ತಾತ್ಕಾಲಿಕ ರಸ್ತೆ ಅತ್ಯಂತ ಕಿರಿದಾಗಿದೆ. ಕೊಕ್ಕಡದಿಂದ ಬರುವ ಮತ್ತು ಹೋಗುವ ವಾಹನಗಳಿಗೆ ಈ ಸಂಪರ್ಕ ರಸ್ತೆ ಅತ್ಯಂತ ಕಿರಿದಾಗಿರುವ ಕಾರಣ ವಾಹನ ಚಾಲಕರು ಪರದಾಡುವ ಪರಿಸ್ಥಿತಿ ಉಂಟಾಗಿದೆ.

ಬೆಳಗ್ಗೆ ಮತ್ತು ಸಂಜೆಯ ಹೊತ್ತಿಗೆ ಖಾಸಗಿ ಶಾಲಾ ಬಸ್ಸು ಹಾಗೂ ಇನ್ನಿತರ ವಾಹನಗಳು ಈ ರಸ್ತೆಯಲ್ಲಿ ನುಗ್ಗುವ ಕಾರಣ ಟ್ರಾಫಿಕ್ ಜಾಮ್ ಆಗಿ ವಾಹನ ಚಾಲಕರು ಪರದಾಡುವ ಪರಿಸ್ಥಿತಿ ನಿರ್ಮಾಣವಾಗಿದೆ. ಘನವಾಹನಗಳಾದ ಶಾಲಾ ಬಸ್ಸು, ಲಾರಿ ಹಾಗೂ ಇನ್ನಿತರ ವಾಹನಗಳು ಈ ಕಿರಿದಾದ ರಸ್ತೆಯಲ್ಲಿಯೇ ನುಗ್ಗುವ ಕಾರಣ ಅಪಾಯಕ್ಕೆ ಎಡೆ ಮಾಡಿದಂತಾಗಿದೆ.

ಸಮೀಪದಲ್ಲಿ ಸರಕಾರಿ ಪ್ರಾಥಮಿಕ ಶಾಲೆ ಇರುವುದರಿಂದ ಮಕ್ಕಳು ರಸ್ತೆ ದಾಟುವುದಕ್ಕಾಗಿ ಹರಸಾಹಸ ಪಡುವುದನ್ನು ಕಾಣಬಹುದು. ಕೆಲವು ಶಾಲಾ ಬಸ್ಸುಗಳು ಯಮದೂತನಂತೆ ನುಗ್ಗುತ್ತಿರುವುದು ಅಲ್ಲದೆ ಇಲ್ಲಿ ಸಂಚರಿಸುವ ಹೆಚ್ಚಿನ ಖಾಸಗಿ ಶಾಲಾ ಬಸ್ಸು ಗಳಲ್ಲಿ ಕಂಡಕ್ಟರ್ ಗಳೇ ಇಲ್ಲ. ಇದರಿಂದಾಗಿ ಈ ಕಿರಿದಾದ ರಸ್ತೆಯಲ್ಲಿ ಸಣ್ಣಪುಟ್ಟ ಶಾಲಾ ಮಕ್ಕಳಿಗೆ ಈ ರಸ್ತೆಯಲ್ಲಿ ನಡೆದುಕೊಂಡು ಹೋಗಲು ದುಸ್ತರವಾಗಿದೆ.

ಅಪಘಾತಗಳು ಇಲ್ಲಿ ಸಂಭವಿಸುತ್ತಲೇ ಇದೆ. ಆದುದರಿಂದ ಸಂಬಂಧ ಪಟ್ಟವರು ತಕ್ಷಣ ಈ ಕಡೆ ಗಮನ ಹರಿಸಿ ಘನವಾಹನಗಳಿಗೆ ತಾತ್ಕಾಲಿಕವಾಗಿ ಈ ರಸ್ತೆಯಲ್ಲಿ ಸಂಚರಿಸದಂತೆ ನಿರ್ಬಂಧಿಸಿದರೆ ಮುಂದೆ ಆಗುವ ದೊಡ್ಡ ಅಪಾಯವನ್ನು ಹಾಗೂ ಇಲ್ಲಿಯ ಮಕ್ಕಳಿಗೆ ಆಗುವಂತಹ ಅಪಾಯವನ್ನು ತಪ್ಪಿಸಬಹುದಾಗಿದೆ. ಎಂಬುದು ಸಾರ್ವಜನಿಕರ ಅಭಿಪ್ರಾಯವಾಗಿದೆ














Leave a Reply