ಪೆಟ್ರೋಲ್ ಸುರಿದುಕೊಂಡು ಆತ್ಮಹತ್ಯೆ

ಪೆಟ್ರೋಲ್ ಸುರಿದುಕೊಂಡು ಆತ್ಮಹತ್ಯೆ

ಉಳ್ಳಾಲ: ಪೆಟ್ರೋಲ್ ಸುರಿದು ಬೆಂಕಿ ಹಚ್ಚಿಕೊಂಡು ವ್ಯಕ್ತಿಯೋರ್ವ ಪತ್ನಿಯ ಸಂಬಂಧಿಕರ ಮನೆಯಲ್ಲೇ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಕೊಣಾಜೆ ಪೊಲೀಸ್ ಠಾಣಾ ವ್ಯಾಪ್ತಿಯ ಮುಚ್ಚಿಲಕೋಡಿ ಎಂಬಲ್ಲಿ ಮಾ.19ರ ಸಂಜೆ ಸಂಭವಿಸಿದೆ. ವಿಟ್ಲ ಕನ್ಯಾನ ನಿವಾಸಿ ಬಾಬು ಶೆಟ್ಟಿಗಾರ್ ಎಂಬವರ ಪುತ್ರ ಹರೀಶ್ (33) ಆತ್ಮಹತ್ಯೆ ಮಾಡಿಕೊಂಡವರು.

ಇವರು 10 ವರ್ಷಗಳಿಂದ ಮುಡಿಪುವಿನ ಇನ್ಫೋಸಿಸ್ ಸಂಸ್ಥೆಯ ಗಾರ್ಡನ್ ಕೆಲಸ ನಿರ್ವಹಿಸುತ್ತಿದ್ದರು. ನವವಿವಾಹಿತರಾಗಿದ್ದ ಹರೀಶ್ ಅವರು ಸಿದ್ದಕಟ್ಟೆ ಸಂಗಬೆಟ್ಟು ನಿವಾಸಿ ಯುವತಿಯನ್ನು ವಿವಾಹವಾಗಿದ್ದರು. ಇದೀಗ ಆಕೆ 7 ತಿಂಗಳ ಗರ್ಭಿಣಿಯಾಗಿದ್ದಾಳೆ.
ಮಾ.12 ರಂದು ಹರೀಶ್ ತನ್ನ ತಾಯಿಯ ಅಕ್ಕನ ಮಗನಾಗಿರುವ ಕೊಣಾಜೆ ಮುಚ್ಚಿಲಕೋಡಿ ನಿವಾಸಿ ರಮೇಶ್ ಶೆಟ್ಟಿಗಾರ್ ಎಂಬವರಿಗೆ ಕರೆ ಮಾಡಿ ತನ್ನ ಬ್ಯಾಗಿನಲ್ಲಿ ಭಸ್ಮ, ತಗಡು ದೊರೆತಿದ್ದು, ವಾಮಾಚಾರ ಮಾಡಿದ್ದಾರೆ ಎಂದು ಆತಂಕ ವ್ಯಕ್ತಪಡಿಸಿದ್ದಾರೆ. ಇದಕ್ಕೆ ಸಹೋದರ ರಮೇಶ್ ಮಾ.19 ಭಾನುವಾರ ಮನೆಗೆ ಬಂದು ಮಾತನಾಡುವ ಎಂದು ತಿಳಿಸಿರುವಂತೆ ಹರೀಶ್ ಅವರು ಮಾತುಕತೆಗೆಂದು ಬಂದಿದ್ದರು. ಆದರೆ ಬರುವಾಗಲೇ ಕ್ಯಾನಿನಲ್ಲಿ ಪೆಟ್ರೋಲ್ ಹಿಡಿದುಕೊಂಡು ಬಂದಿದ್ದರು ಎನ್ನಲಾಗಿದೆ.

ಹರೀಶ್ ಮಾತುಕತೆ ಆರಂಭವಾಗುವ ಮುನ್ನವೇ ಅಂಗಳದಲ್ಲಿ ಮೈಪೂರ್ತಿ ಪೆಟ್ರೋಲ್ ಸುರಿದುಕೊಂಡು ಬೆಂಕಿ ಹಚ್ಚಿಕೊಂಡು ಆತ್ಮಹತ್ಯೆಗೆ ಯತ್ನಿಸಿದ್ದಾರೆ. ಮನೆಮಂದಿ ಗಾಬರಿಗೊಂಡು ಕೊಣಾಜೆ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಕೊಣಾಜೆ ಪೊಲೀಸರು ತಕ್ಷಣ ಘಟನಾ ಸ್ಥಳಕ್ಕೆ ಭೇಟಿ ನೀಡಿ, ಆಂಬ್ಯುಲೆನ್ಸ್ ಮೂಲಕ ಆಸ್ಪತ್ರೆಗೆ ಸಾಗಿಸುವ ದಾರಿಮಧ್ಯೆ ಹರೀಶ್ ಸಾವನ್ನಪ್ಪಿದ್ದಾರೆ. ಅರೆಬೆಂದ ಸ್ಥಿತಿಯಲ್ಲಿದ್ದ ಹರೀಶ್ ಖುದ್ದಾಗಿ ಅವರೇ ಆಂಬ್ಯುಲೆನ್ಸ್ ಹತ್ತಿದ್ದರು.
ರಮೇಶ್ ಶೆಟ್ಟಿಗಾರ್ ಹರೀಶ್ ಅವರ ಸಹೋದರನಾಗಿದ್ದರೆ, ರಮೇಶ್ ಅವರ ಪತ್ನಿಗೆ ಹರೀಶ್ ಅವರ ಪತ್ನಿ ಚಿಕ್ಕಮ್ಮನ ಮಗಳಾಗಿದ್ದಳು. ಸಂಬಂಧದ ಒಳಗಡೆ ಇಬ್ಬರಿಗೂ ವಿವಾಹ ನಡೆದಿತ್ತು. ಪತ್ನಿ ಸರಿಯಾಗಿ ಮಾತನಾಡುತ್ತಿಲ್ಲ, ಕಿವಿ ಕೇಳದಂತೆ ವರ್ತಿಸುತ್ತಾರೆ ಅನ್ನುವ ಆರೋಪವನ್ನು ಹರೀಶ್ ಮಾಡುತ್ತಿದ್ದರು ಎಂದು ತಿಳಿದು ಬಂದಿದೆ.
ಕೊಣಾಜೆ ಪೊಲೀಸ್ ಠಾಣೆಯಲ್ಲಿ ಆತ್ಮಹತ್ಯೆ ಪ್ರಕರಣ ದಾಖಲಾಗಿದೆ. ಆರ್ಥಿಕವಾಗಿ ಯಾವುದೇ ರೀತಿಯ ಸಂಕಷ್ಟ ಇಲ್ಲದ ಹರೀಶ್, ಇದೇ ತಿಂಗಳ ಒಳಗೆ ಪತ್ನಿಗೆ ಸೀಮಂತ ಮಾಡುವವರಿದ್ದರು.

Leave a Reply

You May Have Missed

error: Content is protected !!