ಓಮ್ನಿ ಅಪಘಾತ – ವೃದ್ಧೆ ಸಾವು, ಮೂವರಿಗೆ ಗಂಭೀರ ಗಾಯ

ಓಮ್ನಿ ಅಪಘಾತ – ವೃದ್ಧೆ ಸಾವು, ಮೂವರಿಗೆ ಗಂಭೀರ ಗಾಯ

ಉಳ್ಳಾಲ: ಹೆದ್ದಾರಿ ಬದಿಯ ಕಬ್ಬಿಣದ ಸಲಾಕೆಯ ತಡೆಬೇಲಿಗೆ ಓಮ್ನಿ‌ ಕಾರು ಢಿಕ್ಕಿ ಹೊಡೆದ ಪರಿಣಾಮ 85ರ ವೃದ್ಧೆಯೋರ್ವರ ದೇಹ ಛಿದ್ರಗೊಂಡು ಸಾವನ್ನಪ್ಪಿದ ಘಟನೆ ರಾ.ಹೆ 66 ರ ಉಚ್ಚಿಲ ಎಂಬಲ್ಲಿ ಇಂದು ಮುಂಜಾನೆ ನಸುಕಿನ ಜಾವ ಸಂಭವಿಸಿದೆ.
ಕಾಸರಗೋಡು ಜಿಲ್ಲೆಯ ಮಂಜೇಶ್ವರ, ಕುಂಜತ್ತೂರು ನಿವಾಸಿ ಬಿ.ಫಾತಿಮಾ(85)ಮೃತಪಟ್ಟ ವೃದ್ಧೆ. ಫಾತಿಮಾ ಅವರು ತನ್ನ ಮಗ ಮೂಸ(50) ಮೊಮ್ಮಗ ಮಸ್ತಫಾ(24) ಜೊತೆ ನಿನ್ನೆ ಮಂಗಳೂರಿನ ಅಡ್ಡೂರಿಗೆ ತೆರಳಿ ಸಂಬಂಧಿಕರೋರ್ವರ ಶವಸಂಸ್ಕಾರವೊಂದರಲ್ಲಿ ಪಾಲ್ಗೊಂಡು ಹಿಂತಿರುಗುತ್ತಿದ್ದ ವೇಳೆ ಇಂದು ಮುಂಜಾನೆ 2 ಗಂಟೆ ಸುಮಾರಿಗೆ ಘಟನೆ ಸಂಭವಿಸಿದೆ.

ಫಾತಿಮಾ ಓಮ್ನಿ ಕಾರಿನ ಮುಂಭಾಗದಲ್ಲಿ ಕುಳಿತಿದ್ದು ಮೊಮ್ಮಗ ಮುಸ್ತಫಾ ಕಾರು ಚಲಾಯಿಸುತ್ತಿದ್ದ ಎನ್ನಲಾಗಿದ್ದು, ನಿದ್ದೆ ಮಂಪರಲ್ಲಿ ಚಾಲಕನ ನಿಯಂತ್ರಣ ತಪ್ಪಿ ಹೆದ್ದಾರಿ ಬದಿಯ ತಡೆಬೇಲಿಗೆ ಕಾರು ಢಿಕ್ಕಿ ಹೊಡೆದಿದೆ ಎನ್ನಲಾಗುತ್ತಿದೆ.

ಘಟನೆಯನ್ನು ಕಂಡ ವಾಹನಸವಾರರೊಬ್ಬರು ತಲಪಾಡಿಯಲ್ಲಿ ಗಸ್ತಲ್ಲಿದ್ದ ಟ್ರಾಫಿಕ್ ಪೊಲೀಸರಲ್ಲಿ ವಿಚಾರ ತಿಳಿಸಿದ್ದಾರೆ. ತಕ್ಷಣ ಸ್ಥಳಕ್ಕೆ ಧಾವಿಸಿದ ಟ್ರಾಫಿಕ್ ಸಿಬ್ಬಂದಿಗಳಾದ ಮಹೇಶ್ ಆಚಾರ್ಯ ಮತ್ತು ವಿಠ್ಠಲ್ ದಾಸ್ ಅವರು ಕಬ್ಬಿಣದ ಸಲಾಕೆ ಎಡೆಯಲ್ಲಿ ಸಿಲುಕಿ ಛಿಧ್ರಗೊಂಡಿದ್ದ ಫಾತಿಮಾರನ್ನು ಹೊರಗೆಳೆದು ರಕ್ತದ ಮಡುವಲ್ಲಿದ್ದ ಮೂವರನ್ನು ತಮ್ಮ ಇಲಾಖಾ ವಾಹನದಲ್ಲಿ ದೇರಳಕಟ್ಟೆಯ ಖಾಸಗಿ ಆಸ್ಪತ್ರೆಗೆ ಸೇರಿಸಿದ್ದಾರೆ.

ಮಂಗಳೂರು ದಕ್ಷಿಣ ಸಂಚಾರಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Leave a Reply

You May Have Missed

error: Content is protected !!