ಕೌಕ್ರಾಡಿ: ಕಸ ಎಸೆತ ನಿರಂತರ; ಕ್ರಮ ಕೈಗೊಳ್ಳಲು ಸಾರ್ವಜನಿಕರ ಆಗ್ರಹ

ಕೌಕ್ರಾಡಿ: ಕಸ ಎಸೆತ ನಿರಂತರ; ಕ್ರಮ ಕೈಗೊಳ್ಳಲು ಸಾರ್ವಜನಿಕರ ಆಗ್ರಹ

ಪೆರಿಯಶಾಂತಿ-ಇಚ್ಲಂಪಾಡಿ ಹೆದ್ದಾರಿ

ಕೌಕ್ರಾಡಿ: ಗ್ರಾಮ ಪಂಚಾಯತ್‌ಗಳು ಮನೆ ಮನೆಗೆ, ಅಂಗಡಿಗಳಿಗೆ ಬಂದು ಹಸಿ ಕಸ ಒಣ ಕಸವನ್ನು ಪ್ರತ್ಯೇಕಿಸಿ ಕಸ ವಿಲೇವಾರಿಗೆ ಹಲವಾರು ಕ್ರಮ ಕೈಗೊಂಡಿದ್ದರೂ ರಸ್ತೆ ಬದಿ ಕಸ, ತ್ಯಾಜ್ಯ ಎಸೆಯುವವರ ಸಂಖ್ಯೆ ಕಡಿಮೆಯಾಗುತ್ತಿಲ್ಲ. ಈ ಬಗ್ಗೆ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಬೇಕಾದ ಅಧಿಕಾರಿಗಳು ನಿರ್ಲಕ್ಷ್ವ ವಹಿಸಿದ್ದಾರೆ ಎಂದು ಸಾರ್ವಜನಿಕರು ಆರೋಪಿಸುತ್ತಿದ್ದಾರೆ.

ಪೆರಿಯಶಾಂತಿ-ಇಚ್ಲಂಪಾಡಿ ಹೆದ್ದಾರಿಯಲ್ಲಿ ಅಲ್ಲಲ್ಲಿ ಕಸದ ರಾಶಿ ಕಂಡು ಬರುತ್ತದೆ. ಹೊಟೇಲ್‌ಗ‌ಳು, ಅಂಗಡಿ ವ್ಯಾಪಾರಸ್ಥರು, ವಾಹನ ಪ್ರಯಾಣಿಕರು ಪ್ಲಾಸ್ಟಿಕ್‌ ಬಾಟಲಿ, ಪ್ಲಾಸ್ಟಿಕ್‌ ಚೀಲಗಳನ್ನು ರಸ್ತೆ ಬದಿ ಎಸೆಯುವುದು ಜತೆಗೆ ವಾಹನಗಳಲ್ಲಿ ತ್ಯಾಜ್ಯಗಳನ್ನು ತಂದು ಜನರಹಿತ ರಸ್ತೆ ಬದಿಗಳಲ್ಲಿ ಬಿಸಾಡುತ್ತಾರೆ. ಹಲವೆಡೆ ಇಂತಹ ತ್ಯಾಜ್ಯಗಳ ರಾಶಿಯೇ ತುಂಬಿರುತ್ತದೆ. ರಸ್ತೆ ಬದಿಯಲ್ಲಿ ತ್ಯಾಜ್ಯ ಸುರಿದು ಪರಿಸರ ಹಾಳು ಮಾಡುವವರಿಗೆ ದಂಡದ ಜತೆ ಕ್ರಿಮಿನಲ್‌ ಮೊಕದ್ದಮೆ ದಾಖಲಿಸುವ ಎಚ್ಚರಿಕೆ ಇದ್ದರೂ ರಸ್ತೆ ಬದಿ ಕಸ ಎಸೆಯುವವರು ನಿರಾತಂಕವಾಗಿ ತಮ್ಮ ಕಾರ್ಯ ನಡೆಸುತ್ತಲೇ ಇದ್ದಾರೆ.

ಗ್ರಾಮ ಪಂಚಾಯತ್‌ ವ್ಯಾಪ್ತಿಗಳಲ್ಲಿ ಇಂತಹ ಆಯಕಟ್ಟಿನ ಸ್ಥಳಗಳಲ್ಲಿ ಕಸ ಬಿಸಾಡದಂತೆ ಎಚ್ಚರಿಕೆ ಬೋರ್ಡ್‌ ಹಾಕಿದ್ದರೂ ಅಲ್ಲಿಯೇ ಕಸ ಎಸೆಯುವುದನ್ನು ತಡೆಯುವುದು ಸವಾ ಲಾಗಿದೆ. ಇಂತಹ ಸ್ಥಳಗಳಲ್ಲಿ ಸಿಸಿ ಕೆಮರಾ ಅಳವಡಿಸಿ ತಪ್ಪಿತಸ್ಥರನ್ನು ಕಂಡು ಹಿಡಿದು ಶಿಕ್ಷೆ ವಿಧಿಸಬೇಕಾಗಿದೆ.

ಪರಿಸರ ಮಾಲಿನ್ಯ
ಹೆದ್ದಾರಿಗಳಲ್ಲಿ, ಮುಖ್ಯ ರಸ್ತೆಗಳಲ್ಲಿ, ಅರಣ್ಯ ಪ್ರದೇಶಗಳಲ್ಲಿ, ಜನರಹಿತ ಪ್ರದೇಶಗಳು ಇಂತಹ ಅಕ್ರಮ ತ್ಯಾಜ್ಯ ವಿಲೇವಾರಿಯ ತಾಣಗಳಾಗಿವೆ. ನಿರ್ಜನ ಸ್ಥಳದಲ್ಲಿ ರಸ್ತೆ ಬದಿಯಲ್ಲಿ ತ್ಯಾಜ್ಯಗಳಿರುವ ಪ್ಲಾಸ್ಟಿಕ್‌ ಚೀಲಗಳನ್ನು ಎಸೆದು ಪರಾರಿಯಾಗುತ್ತಾರೆ. ಇದರಲ್ಲಿ ಕೋಳಿ ತ್ಯಾಜ್ಯಗಳೂ ತುಂಬಿರುತ್ತದೆ. ಇದು ದುರ್ನಾತವನ್ನು ಬೀರಿ ಪರಿಸರವನ್ನು ಮಾಲಿನ್ಯಗೊಳಿಸುತ್ತವೆ ಅಲ್ಲದೆ ಕಾಡು ಪ್ರಾಣಿಗಳಿಗೂ ತೊಂದರೆಯಾಗಲಿದೆ.

Leave a Reply

You May Have Missed

error: Content is protected !!