ರಸ್ತೆಯ ತಿರುವಿನಲ್ಲಿ ಹೊಂಡದಲ್ಲಿ ಸಿಲುಕಿದ ಬಸ್; ಪ್ರಯಾಣಿಕರು ಅಧಿಕಾರಿಗಳ ನಿರ್ಲಕ್ಷ್ಯಕ್ಕೆ ಆಕ್ರೋಶ

ರಸ್ತೆಯ ತಿರುವಿನಲ್ಲಿ ಹೊಂಡದಲ್ಲಿ ಸಿಲುಕಿದ ಬಸ್; ಪ್ರಯಾಣಿಕರು ಅಧಿಕಾರಿಗಳ ನಿರ್ಲಕ್ಷ್ಯಕ್ಕೆ ಆಕ್ರೋಶ

ಕೆಎಸ್‌ಆರ್‌ಟಿಸಿ ಬಸ್‌ ಸುಬ್ರಹ್ಮಣ್ಯದ ಕುಲ್ಕುಂದ-ಬಿಸಿಲೆ ಘಾಟ್ ರಸ್ತೆಯ ಶ್ರೀ ಚೌಡೇಶ್ವರಿ ಅಮ್ಮನವರ ದೇವಾಲಯದ ಸಮೀಪದ ತಿರುವಿನಲ್ಲಿ ಚಕ್ರ ಹೊಂಡದಲ್ಲಿ ಸಿಲುಕಿಕೊಂಡು ಬಸ್ ಬಾಕಿಯಾದ ಘಟನೆ ರವಿವಾರ ಮುಂಜಾನೆ ಸಂಭವಿಸಿದೆ.
ಬೆಂಗಳೂರಿನಿಂದ ಅರಕಲಗೂಡು ಶನಿವಾರ ಸಂತೆ ಕುಕ್ಕೆ ಸುಬ್ರಹ್ಮಣ್ಯ ಮಾರ್ಗವಾಗಿ ಮಂಗಳೂರಿಗೆ ತೆರಳುವ ಬಸ್ ಇದಾಗಿತ್ತು. ರವಿವಾರ ಮುಂಜಾನೆ ಹೊತ್ತಿಗೆ ಬಿಸ್ಲೆ ಗಡಿ ದೇವಾಲಯದ ಸಮೀಪ ರಸ್ತೆಯ ತಿರುವಿನಲ್ಲಿ ಬಸ್ ರಸ್ತೆಯ ಬದಿ ಆಳವಾದ ಹೊಂಡಕ್ಕೆ ಬಸ್ಸಿನ ಹಿಂಭಾಗವು ಸರಿದು ಸಿಲುಕಿಕೊಂಡಿದೆ.
ಬಸ್ಸನ್ನು ಮೇಲೆತ್ತಲು ಕ್ರೇನ್ ತರಿಸಲು ಭರವಸೆ ನೀಡಿದ್ದರೂ ಮಾಡಿರಲಿಲ್ಲ ಎಂದು ದೂರು ವ್ಯಕ್ತವಾಗಿದೆ. ಮಧ್ಯಾಹ್ನವರೆಗೂ ಬಸ್ಸಿನ ತೆರವು ಕಾರ್ಯ ನಡೆದಿರಲಿಲ್ಲ. ಜತೆಗೆ ಪ್ರಯಾಣಿಕರಿಗೆ ಬದಲಿ ವ್ಯವಸ್ಥೆಯನ್ನೂ ಮಾಡಿರಲಿಲ್ಲ. ಘಟನೆಯಿಂದ ಅನೇಕ ಪ್ರಯಾಣಿಕರಿಗೆ ಹಾಗೂ ಚಿಕಿತ್ಸೆಗೆಂದು ಮಂಗಳೂರಿಗೆ ತೆರಳುವಂಥ ಪ್ರಯಾಣಿಕರಿಗೆ, ಸಣ್ಣ ಪುಟ್ಟ ಮಕ್ಕಳು ಸಂಕಷ್ಟ ಅನುಭವಿಸಿದರು.

ಬದಲಿ ವ್ಯವಸ್ಥೆ ಕೈಗೊಳ್ಳದ ಬಗ್ಗೆ ಪ್ರಯಾಣಿಕರು ಅಧಿಕಾರಿಗಳ ನಿರ್ಲಕ್ಷ್ಯಕ್ಕೆ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಅಲ್ಲದೇ ಘಟನೆ ನಡೆದ ಸ್ಥಳವೂ ಅರಣ್ಯದ ಮಧ್ಯದಲ್ಲಿದ್ದು, ಕಾಡುಪ್ರಾಣಿಗಳ ಸಂಚಾರವೂ ಇರುತ್ತದೆ. ಘಟನೆಯಿಂದ ರಸ್ತೆ ಬಂದ್ ಆಗಿದ್ದು, ಎರಡೂ ಕಡೆಗಳಲ್ಲೂ ವಾಹನಗಳು ಸಾಲುಗಟ್ಟಿ ನಿಂತಿದ್ದವು. ಮಧ್ಯಾಹ್ನ ಬಳಿಕ ಬಸ್ ತೆರವಿಗೆ ವ್ಯವಸ್ಥೆ ಮಾಡಲಾಗಿದೆ.

Leave a Reply

You May Have Missed

error: Content is protected !!