ಜ್ವರವೆಂದು ವೈದ್ಯರು ಕೊಟ್ಟ ಇಂಜೆಕ್ಷನ್ ಯುವಕನ ಪ್ರಾಣವನ್ನೇ ಕಸಿಯಿತಾ?

ಜ್ವರವೆಂದು ವೈದ್ಯರು ಕೊಟ್ಟ ಇಂಜೆಕ್ಷನ್ ಯುವಕನ ಪ್ರಾಣವನ್ನೇ ಕಸಿಯಿತಾ?

ಜ್ವರ ಎಂದು ಆಸ್ಪತ್ರೆಗೆ ದಾಖಲಾದ ಯುವಕನ ಪ್ರಾಣವೇ ಹೋದ ಘಟನೆಯೊಂದು ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ ನಡೆದಿದೆ.
ಮೃತನನ್ನು ಅಮರ್ ಶೆಟ್ಟಿ(31) ಎಂದು ಗುರುತಿಸಲಾಗಿದೆ. ಉಡುಪಿ ಮೂಲದ ಈತ ದುಬೈನಲ್ಲಿ 7 ವರ್ಷ ಕೆಲಸ ಮಾಡಿ, ಲೈಫ್ ಸೆಟಲ್ ಮಾಡಿಕೊಳ್ಳೋದಕ್ಕೆ ಅಂತಾ ಕಳೆದ ಒಂದು ವರ್ಷದ ಹಿಂದೆ ಬೆಂಗಳೂರಿಗೆ ಬಂದಿದ್ದ. ಬೆಂಗಳೂರಿನಲ್ಲಿ ಹೋಟೆಲ್ ಉದ್ಯಮ ನಡೆಸುತ್ತಿದ್ದ. ಆದರೆ ಈತನಿಗೆ ಕಳೆದ ವಾರ ಜ್ವರ ಕಾಣಿಸಿಕೊಂಡಿದೆ. ಹೀಗಾಗಿ ಅಲ್ಲೇ ಪಕ್ಕದಲ್ಲಿದ್ದ ಮಾಗಡಿ ರಸ್ತೆಯಲ್ಲಿರುವ ಕ್ಲಿನಿಕ್‍ಗೆ ತೆರಳಿ ಚಿಕಿತ್ಸೆ ಪಡೆದುಕೊಂಡಿದ್ದಾನೆ.
ಕ್ಲಿನಿಕ್‍ನ ವೈದ್ಯ ತಪಾಸಣೆ ನಡೆಸಿ ಜ್ವರಕ್ಕೆ ಇಂಜೆಕ್ಷನ್ ಕೊಟ್ಟಿದ್ದಾರೆ. ಆದರೆ ಅಮರ್‍ಗೆ ಇಂಜೆಕ್ಷನ್ ಕೊಟ್ಟ ಭಾಗದಲ್ಲಿ ನೋವು, ಊತ ಕಾಣಿಸಿಕೊಂಡಿದೆ. ಬಳಿಕ ಹೆಚ್ಚಿನ ಚಿಕಿತ್ಸೆಗೆ ಅಂತ ಕಿಮ್ಸ್ ಆಸ್ಪತ್ರೆಗೆ ಯುವಕ ದಾಖಲಾಗಿದ್ದಾನೆ. ಆದರೆ ಅಷ್ಟರಲ್ಲಿ ಯುವಕನ ಬಹು ಅಂಗಾಂಗಗಳಿಗೆ ಹಾನಿ ಆಗಿದೆ. ಕಿಮ್ಸ್ ಆಸ್ಪತ್ರೆ ವೈದ್ಯರ ಚಿಕಿತ್ಸೆಗೆ ಸ್ಪಂದಿಸಿದೇ ಮೃತಪಟ್ಟಿದ್ದಾನೆ.
ಯುವಕ ಅಮರ್ ಶೆಟ್ಟಿ ಸಾವಿಗೆ ಇಂಜೆಕ್ಷನ್ ಕೊಟ್ಟ ವೈದ್ಯರೇ ಕಾರಣ ಎಂದು ಕುಟುಂಬಸ್ಥರು ಆರೋಪಿಸಿದ್ದು, ಕೆಪಿ ಅಗ್ರಹಾರ ಠಾಣೆಯಲ್ಲಿ ದೂರು ಕೊಟ್ಟಿದ್ದಾರೆ. ಕಿಮ್ಸ್ ಶವಗಾರದ ಮುಂದೆ ಮೃತನ ಕುಟುಂಬಸ್ಥರ ಅಕ್ರಂದನ ಮುಗಿಲು ಮುಟ್ಟಿತ್ತು. ಇನ್ನು ಆರೋಪಿತ ವೈದ್ಯ ನನ್ನದೇನೂ ತಪ್ಪಿಲ್ಲ, ನನ್ನ ಕೆಲಸ ಮಾಡಿದ್ದೇನೆ ಎಂದಿದ್ದಾರೆ.

Leave a Reply

You May Have Missed

error: Content is protected !!