ವಿವಾಹ ವಾರ್ಷಿಕೋತ್ಸವ: ಭಾವುಕ ಸಾಲುಗಳ ಬರೆದು ಪತ್ನಿಗೆ ವಿಶ್ ಮಾಡಿದ ವಿಜಯ ರಾಘವೇಂದ್ರ

ಇಂದು ನಟ ವಿಜಯ ರಾಘವೇಂದ್ರ ಮತ್ತು ಸ್ಪಂದನಾ ಅವರ 16ನೇ ವಿವಾಹ ವಾರ್ಷಿಕೋತ್ಸವ. ಪ್ರತಿ ವರ್ಷವೂ ಸಂಭ್ರಮದಿಂದ ಈ ದಿನವನ್ನು ಬರಮಾಡಿಕೊಳ್ಳುತ್ತಿದ್ದರು ಈ ದಂಪತಿ. ಆದರೆ, ವಿಧಿಯಾಟ ಈ ಬಾರಿ ಬೇರೆಯೇ ಆಗಿದೆ. ಸ್ಪಂದನಾ ಹೃದಯಾಘಾತದಿಂದ ನಿಧನರಾಗಿ, ವಿಜಯ್ ಅವರ ಎದೆಯಲ್ಲಿ ಆರದ ಗಾಯ ಮಾಡಿ ಹೋಗಿದ್ದಾರೆ. ಅಗಲಿದ ಪತ್ನಿಗೆ ವಿಜಯ ರಾಘವೇಂದ್ರ ಭಾವುಕ ಸಾಲುಗಳ ಮೂಲಕ ವಿಶ್ ಮಾಡಿದ್ದಾರೆ. ಪ್ರೀತಿಸಿ ಗುರುಹಿರಿಯರ ಸಮ್ಮತಿ ಪಡೆದು ಆಗಸ್ಟ್ 26ರಂದು 2017ರಲ್ಲಿ ವಿಜಯ-ಸ್ಪಂದನಾ ಮದುವೆಯಾದವರು. ಅವರ ದಾಂಪತ್ಯಕ್ಕೆ ಪ್ರೀತಿಗೆ ಶೌರ್ಯ ಎಂಬ ಪುತ್ರ ಸಾಕ್ಷಿಯಾಗಿದ್ದಾರೆ.
ಭಾವುಕ ಸಾಲುಗಳನ್ನು ಬರೆದು, ಅದಕ್ಕೆ ವಿಡಿಯೋ ಸ್ಪರ್ಶ ಕೂಡ ನೀಡಿರುವ ವಿಜಯ ರಾಘವೇಂದ್ರ “ಚಿನ್ನ, ಇಣುಕು ನೋಟ ಬೀರಿ ಹೋದೆ ಬದುಕಿನ ಅಂಗಳದಲಿ.. ಎಲ್ಲೆ ಮೀರಿ ಒಲವ ನೀಡಿದೆ ಎದೆಯ ಅಂತರಾಳದಲಿ.. ಬದುಕನ್ನು ಕಟ್ಟಿ ಸರ್ವಸ್ವವಾದೆ.. ಉಸಿರಲ್ಲಿ ಬೆರೆತು ಜೀವಂತವಾದೆ.. ಮುದ್ದಾದ ನಗುವಿನಲ್ಲಿದ್ದ ಶಕ್ತಿ ಪರ್ವತದಷ್ಟು.. ಮರೆಯದೆ ತೊರೆಯದೆ ಎದೆಗೊತ್ತಿ ಪ್ರೀತಿಸುವೆ..” ಎಂದು ಬರೆದುಕೊಂಡಿದ್ದಾರೆ
ಪತ್ನಿಯ ನಿಧನದಿಂದ ಮೌನಕ್ಕೆ ಶರಣಾಗಿದ್ದ ವಿಜಯ್ ಮೊನ್ನೆಯಷ್ಟೇ ಸ್ಪಂದನಾ ಬಗ್ಗೆ ಭಾವುಕರಾಗಿ ವೀಡಿಯೋ ಮೂಲಕ ಮನದಾಳದ ಭಾವನೆಗಳನ್ನ ಅಕ್ಷರ ರೂಪಕ್ಕೆ ಇಳಿಸಿದ್ದರು. ಸ್ಪಂದನಾ ನೆನಪನ್ನ ತಮ್ಮೊಳಗಿನ ಪ್ರೀತಿಯನ್ನ ಅವರು ಬಿಚ್ಚಿಟ್ಟಿದ್ದರು. ಆ ಸಾಲುಗಳು ಕೂಡ ಅನೇಕರನ್ನು ಭಾವುಕರನ್ನಾಗಿಸಿದ್ದವು.
ಸ್ಪಂದನಾ ಹೆಸರಿಗೆ ತಕ್ಕ ಜೀವ. ಉಸಿರಿಗೆ ತಕ್ಕ ಭಾವ. ಅಳತೆಗೆ ತಕ್ಕ ನುಡಿ. ಬದುಕಿಗೆ ತಕ್ಕ ನಡೆ. ನಮಗೆಂದೇ ಮಿಡಿದ ನಿನ್ನ ಹೃದಯವ. ನಿಲ್ಲದು ನಿನ್ನೊಂದಿಗಿನ ಕಲರವ. ನಾನೆಂದೂ ನಿನ್ನವ. ಕೇವಲ ನಿನ್ನವ ಎಂದು ವಿಜಯ ರಾಘವೇಂದ್ರ ಭಾವನ್ಮಾತಕವಾಗಿ ಸಾಲುಗಳನ್ನು ಬರೆದುಕೊಂಡಿದ್ದರು.


















Leave a Reply