ಬಿಗ್‌ಬಾಸ್ ತನಿಷಾ ಮೇಲೂ ಇದೀಗ FIR ದಾಖಲು!

ಬಿಗ್‌ಬಾಸ್ ತನಿಷಾ ಮೇಲೂ ಇದೀಗ FIR ದಾಖಲು!

ಬಿಗ್‌ಬಾಸ್‌ ಕನ್ನಡ ಸೀಸನ್‌ 10ರ ಸ್ಪರ್ಧಿ ವರ್ತೂರು ಸಂತೋಷ್‌ ಹುಲಿ ಉಗುರಿನ ಪೆಂಡೆಂಟ್‌ ಧರಿಸಿದ ಪ್ರಕರಣದಲ್ಲಿ ಜೈಲಿಗೆ ಹೋಗಿ ಬಂದ ನಂತರ, ಈಗ ಮತ್ತೊಬ್ಬ ಬಿಗ್‌ಬಾಸ್‌ ಸ್ಪರ್ಧಿ ತನಿಷಾ ಕುಪ್ಪಂಡ ಅವರ ಮೇಲೆ ಜಾತಿ ನಿಂದನೆ ಆರೋಪದಡಿ ಎಫ್‌ಐಆರ್‌ ದಾಖಲಾಗಿದೆ. ಇದರಿಂದಾಗಿ ಮತ್ತೊಮ್ಮ ಬಿಗ್‌ಬಾಸ್‌ ಸ್ಪರ್ಧಾಳು ಆಗಿರುವ ತನಿಷಾಗೆ ಜೈಲು ಶಿಕ್ಷೆ ಆಗುವುದೇ ಎಂಬ ಆತಂಕದಲ್ಲಿ ಕುಟುಂಬಸ್ಥರು ಇದ್ದಾರೆ.

ಭೋವಿ ಸಮುದಾಯದಿಂದ ತಮ್ಮ ಜಾತಿಯನ್ನು ನಿಂದನೆ ಮಾಡಲಾಗಿದೆ ಎಂದು ತನಿಷಾ ಅವರ ಮೇಲೆ ಆರೋಪ ಮಾಡಲಾಗಿದ್ದು, ಈ ಬಗ್ಗೆ ಪೊಲೀಸ್‌ ಇಲಾಖೆಯಿಂದ ಜಾತಿ ನಿಂದನೆ ಪ್ರಕರಣ ದಾಖಲಿಸಿಕೊಂಡು ಜೈಲಿಗಟ್ಟುವಂತೆ ಅಖಿಲ ಕರ್ನಾಟಕ ಭೋವಿ ಸಮುದಾಯದಿಂದ ಒತ್ತಾಯ ಮಾಡಲಾಗಿದೆ.

ತನಿಷಾ ಕುಪ್ಪಂಡ ಅವರು ಮೂಲತಃ ಕೊಡಗಿನವರಾಗಿದ್ದು, ಬೆಂಗಳೂರಿನ ಎನ್‌ಎಂಕೆಆರ್‌ವಿ ಕಾಲೇಜಿನಲ್ಲಿ ಬಿಬಿಎಂ ಪದವಿ ಪಡೆದಿರುವ ಯಶಸ್ವಿ ಉದ್ಯಮಿ ಕೂಡ ಹೌದು.

ಬಿಗ್‌ಬಾಸ್‌ ಸ್ಪರ್ಧೆಯಲ್ಲಿ ತನಿಷಾ ಕುಪ್ಪಂಡ ಅವರು ಡ್ರೋನ್‌ ಪ್ರತಾಪ್‌ ಅವರೊಂದಿಗೆ ಸಂಭಾಷಣೆ ಮಾಡುವಾಗ ಪ್ರತಾಪ್‌ ಅವರಿಗೆ ‘ಒಡ್ಡನೋ ನೀನು ಒಡ್ಡನ ತರ ಆಕ್ಟ್ ಮಾಡ್ತಿದೀಯಾ’ ಎಂಬ ಪದ ಬಳಕೆ ಮಾಡಿದ್ದಾರೆ.

ಕನ್ನಡ ನಾಡಿನ ಹಳ್ಳಿಕಾರ್‌ ರಾಸುಗಳ ತಳಿ ಸಂರಕ್ಷಣೆ ಹಾಗೂ ರೈತರನ್ನು ಪ್ರತಿನಿಧಿಸಿರುವ ಹಾಗೂ ಹುಲಿ ಉಗುರಿನ ಪೆಂಡೆಂಟ್‌ ಧರಿಸಿ ಜೈಲು ಸೇರಿ ಹೊರಬಂದ ವರ್ತೂರು ಸಂತೋಷ್‌ ಅವರೊಂದಿಗೆ ತನಿಷಾ ಹೆಚ್ಚಿನ ಒಡನಾಟವನ್ನು ಹೊಂದಿದ್ದಾರೆ.

ತನಿಷಾ ಅವರಿಗೆ ಯಾವುದೇ ಬಣ್ಣದ ಜಗತ್ತಿನ ಹಿನ್ನೆಲೆ ಇಲ್ಲದಿದ್ದರೂ ಅನೇಕ ಧಾರಾವಾಹಿಗಳಲ್ಲಿ ನಟಿಸಿ ಸೈ ಎನಿಸಿಕೊಂಡಿದ್ದಾರೆ. ಅವರು ಹೆಚ್ಚಾಗಿ ವಿಲನ್‌ ಪಾತ್ರಗಳಿಂದಲೇ ಗುರುತಿಸಿಕೊಂಡಿದ್ದಾರೆ.

ಕನ್ನಡದಲ್ಲಿ ‘ಮಂಗಳಗೌರಿ ಮದುವೆ’ ಧಾರಾವಾಹಿ ಮೂಲಕ ನಟನೆಗೆ ಎಂಟ್ರಿಕೊಟ್ಟ ತನಿಷಾ, ನಂತರ ಇಂತಿ ನಿಮ್ಮ ಆಶಾ, ಸತ್ಯ ಶಿವಂ ಸುಂದರಂ, ವಾರಸ್ದಾರ, ಸರಯೂ, ಸಾಕ್ಷಿ, ಪ್ರೀತಿ ಎಂದರೇನು ಇತರ ಧಾರಾವಾಹಿಗಳಲ್ಲಿ ನಟಿಸಿದ್ದಾರೆ. ಜೊತೆಗೆ ಪರಭಾಷಾ ಸೀರಿಯಲ್‌ಗಳಲ್ಲೂ ಅಭಿನಯಿಸಿದ್ದಾರೆ.

ಮತ್ತೊಂದೆಡೆ ಧಾರವಾಹಿಯ ಜೊತೆಗೆ ಬೆಳ್ಳಿತೆರಯಲ್ಲಿಯೂ ಅವರು ಅಭಿನಯಿಸಿದ್ದಾರೆ. ದಂಡುಪಾಳ್ಯ ಸಿನಿಮಾ ಮೂಲಕ ಬೆಳ್ಳಿತೆರೆಗೆ ಆಗಮಿಸಿದ ತನಿಷಾ, ನಂತರ ಬಾಡಿಗಾರ್ಡ್, ಉಂಡೆನಾಮ, ಪೆಂಟಗನ್ ಸಿನಿಮಾಗಳ ಮೂಲಕ ಗಮನ ಸೆಳೆದಿದ್ದಾರೆ.

ಬೆಳ್ಳಿತೆರಯ ಪೆಂಟಗನ್ ಸಿನಿಮಾದಲ್ಲಿ ತನಿ‍ಷಾ ಕುಪ್ಪಂಡ ಬೋಲ್ಡ್ ಆಗಿ ನಟಿಸಿದ್ದರಿಂದ ಸಿನಿಮಾ ಪ್ರಚಾರದ ವೇಳೆ ಯ್ಯೂಟೂಬರ್‌ ಒಬ್ಬ ಅಶ್ಲೀಲ ಸಿನಿಮಾದಲ್ಲಿ ನಟಿಸುತ್ತೀರಾ ಅಂತ ಪ್ರಶ್ನೆ ಮಾಡಿದ್ದರು. ಈ ಸಂಬಂಧ ತನಿಷಾ ಧ್ವನಿ ಎತ್ತಿದ್ದರು.

ಬಿಗ್‌ಬಾಸ್‌ ಕನ್ನಡ ಸೀಸನ್‌ 10ರಲ್ಲಿ ಸ್ಪರ್ಧಿಯಾಗಿ ಕಾಣಿಸಿಕೊಂಡಿರುವ ತನಿಷಾ ಅವರು ಮಹಿಳೆಯರಲ್ಲಿ ಅತ್ಯಂತ ಗಟ್ಟಿಗಿತ್ತಿಯಾಗಿ ಕಾಣಿಸಿಕೊಂಡಿದ್ದಾರೆ. ಎಲ್ಲರಿಗೂ ಜೋರಾಗಿ ಮಾತನಾಡುತ್ತಾ ಟಾಂಗ್‌ ಕೊಡ್ತಿದ್ದಾರೆ.

ತನ್ನ ಓದಿನಿಂದಲೇ ಉದ್ಯಮದ ಮೇಲೆ ಆಸಕ್ತಿ ಹೊಂದಿದ್ದ ತನಿಷಾ, ಬೆಂಗಳೂರಿನ ರಾಜರಾಜೇಶ್ವರಿ ನಗರದಲ್ಲಿ ‘ಅಪ್ಪುಸ್ ಕಿಚನ್’ ಎಂಬ ನಾನ್‌ವೆಜ್‌ ರೆಸ್ಟೋರೆಂಟ್ ನಡೆಸುತ್ತಿದ್ದಾರೆ.

ಬಿಗ್‌ಬಾಸ್‌ ಮನೆಯಲ್ಲಿ ವರ್ತೂರು ಸಂತೋಷ್‌ ಹಾಗೂ ತನಿಷಾ ಕುಪ್ಪಂಡ ಅವರ ನಡುವೆ ಲವ್ವಿ ಡವ್ವಿ ನಡೆಯುತ್ತಿದೆ ಎಂಬ ಗಾಸಿಪ್‌ಗಳು ಕೂಡ ಹೆಚ್ಚಾಗುತ್ತಿವೆ. ಇದನ್ನು ಜನರು ಒಪ್ಪಿಕೊಳ್ಳುವಂತೆಯೇ ಸಂತೋಷ್‌ ಅವರು ತನಿಷಾಳನ್ನು ಬೆಂಕಿ ಜೊತೆಗೆ ಲವ್ವಾಗ್ತಿದೆ ಎಂದು ಹೇಳಿಕೊಂಡಿದ್ದಾರೆ.

Leave a Reply

You May Have Missed

error: Content is protected !!