ಉಜಿರೆಯಲ್ಲಿ ವಿಶ್ವ ಕುಂದಾಪ್ರ ಕನ್ನಡ ದಿನಾಚರಣೆ

ಉಜಿರೆಯಲ್ಲಿ ವಿಶ್ವ ಕುಂದಾಪ್ರ ಕನ್ನಡ ದಿನಾಚರಣೆ

ಉಜಿರೆ: ಪ್ರತಿಯೊಂದು ಪ್ರದೇಶಕ್ಕೂ ತನ್ನದೇ ಆದ ಸಂಸ್ಕೃತಿ ಹಾಗೂ ಸಂಪ್ರದಾಯಗಳು ಇವೆ. ಇವತ್ತು ನಾವು ನಮ್ಮ ಮೂಲ ಸಂಸ್ಕೃತಿಯನ್ನು ಮರೆತು ಅನ್ಯ ಸಂಸ್ಕೃತಿಗೆ ಮಾರುಹೋಗುತ್ತಿದ್ದೇವೆ . ಕುಂದಾಪುರ ಭಾಗದ ನೆಲದ ಸಂಸ್ಕೃತಿ , ಭಾಷೆ , ಉತ್ಸವಗಳು ವಿಶಿಷ್ಟವಾಗಿ ನಿಲ್ಲುತ್ತವೆ. ಕುಂದಾಪ್ರ ಭಾಷೆಯ ಸೊಗಡು ಅನನ್ಯವಾದುದು ಎಂದು ಉಜಿರೆಯ ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಪದವಿಪೂರ್ವ ಕಾಲೇಜಿನ ಪ್ರಾಚಾರ್ಯ ಪ್ರಮೋದ್ ಕುಮಾರ್ ಬಿ ಅವರು ಹೇಳಿದರು.

ಇವರು ಉಜಿರೆಯ ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಪದವಿಪೂರ್ವ ಕಾಲೇಜಿನ ರಾಷ್ಟ್ರೀಯ ಸೇವಾ ಯೋಜನೆ ಹಾಗೂ ಸಂಹಿಕ ಭಾಷಾ ವೇದಿಕೆಯ ವತಿಯಿಂದ ನಡೆದ ಕುಂದಾಪ್ರ ಕನ್ನಡ ದಿನಾಚರಣೆಯ ಸಂದರ್ಭದಲ್ಲಿ ಮಾತನಾಡುತ್ತಿದ್ದರು.

ಕುಂದಾಪ್ರ ಭಾಷೆ , ಸಂಸ್ಕೃತಿ , ಆಚಾರ ವಿಚಾರಗಳ ಬಗ್ಗೆ ರಾಜ್ಯಪ್ರಶಸ್ತಿ ಪುರಸ್ಕೃತ ಬಿ.ಸೋಮಶೇಖರ ಶೆಟ್ಟಿ , ಎಸ್ ಡಿ ಎಂ ಪದವಿ ಕಾಲೇಜಿನ ಉಪನ್ಯಾಸಕರಾದ ಹರೀಶ್ ಶೆಟ್ಟಿ , ಅಭಿಜ್ಞಾ ಉಪಾಧ್ಯಾಯ , ಶ್ರೀ ಧರ್ಮಸ್ಥಳ ಗ್ರಾಮಾಭಿವೃದ್ದಿ ಯೋಜನೆಯ ಅಧಿಕಾರಿ ಪ್ರದೀಪಕುಮಾರ್ ಶೆಟ್ಟಿಯವರು ಮಾತನಾಡಿದರು.

ಉಪ ಪ್ರಾಚಾರ್ಯ ಡಾ. ರಾಜೇಶ್ ಬಿ ಉಪಸ್ಥಿತರಿದ್ದರು. ಅಶ್ಮಿತಾ ಸ್ವಾಗತಿಸಿ , ಪ್ರಥ್ವಿ ಹೆಗಡೆ ವಂದಿಸಿದರು. ರಾ. ಸೇ. ಯೋಜನೆಯ ಕಾರ್ಯಕ್ರಮಾಧಿಕಾರಿ ಡಾ. ಪ್ರಸನ್ನಕುಮಾರ ಐತಾಳ್ ಹಾಗೂ ಉಪನ್ಯಾಸಕಿ ಅಮೃತಾ ಶೆಟ್ಟಿ ನಿರೂಪಿಸಿದರು.

ಇದೇ ಸಂದರ್ಭದಲ್ಲಿ ಕುಂದಾಪ್ರ ಕನ್ನಡ ಭಿತ್ತಿಪತ್ರಿಕೆಯನ್ನು ಬಿಡುಗಡೆಗೊಳಿಸಲಾಯಿತು ಹಾಗೂ ಅಂಕಿತಾ ಬಳಗ , ಅಪರ್ಣಾ ಬಳಗ ಹಾಗೂ ಸುಭಾಷ್ ಶೆಟ್ಟಿ ಬಳಗದವರಿಂದ ಕುಂದಾಪ್ರ ಕನ್ನಡದ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಿತು.

Leave a Reply

You May Have Missed

error: Content is protected !!