ಪುತ್ತೂರು ಬೈಪಾಸ್‌ನಲ್ಲಿ ಲಾರಿಗೆ ಢಿಕ್ಕಿ ಹೊಡೆದು ಬೈಕ್ ಸವಾರ ಮೃತ್ಯು

Puttur

ಪುತ್ತೂರು ಬೈಪಾಸ್‌ನಲ್ಲಿ ಲಾರಿಗೆ ಢಿಕ್ಕಿ ಹೊಡೆದು ಬೈಕ್ ಸವಾರ ಮೃತ್ಯು

ಪುತ್ತೂರು: ಪುತ್ತೂರು ನಗರದ ಉರ್ಲಾಂಡಿ ಬೈಪಾಸ್ ರಸ್ತೆಯಲ್ಲಿ ಭಾನುವಾರ ತಡರಾತ್ರಿ ಸಂಭವಿಸಿದ ಭೀಕರ ಅಪಘಾತದಲ್ಲಿ ಬೈಕ್ ಸವಾರ ಸುದೀಪ್ (36) ಮೃತಪಟ್ಟಿದ್ದಾರೆ. ಅವರು ಪುತ್ತೂರು ತಾಲೂಕಿನ ಆರ್ಯಾಪು ಗ್ರಾಮದ ಕುಂಜೂರು ನಿವಾಸಿಯಾಗಿದ್ದರು.

ಮಾಣಿ-ಮೈಸೂರು ರಾಷ್ಟ್ರೀಯ ಹೆದ್ದಾರಿಯಲ್ಲಿ ಶಾಮಿಯಾನ ಸಾಗಿಸುತ್ತಿದ್ದ ಲಾರಿಯೊಂದು ಯಾವುದೇ ಮುನ್ನೆಚ್ಚರಿಕಾ ಸಂಕೇತಗಳಿಲ್ಲದೆ ರಸ್ತೆಯ ಅಂಚಿನಲ್ಲಿ ನಿಲ್ಲಿಸಲಾಗಿತ್ತು ಎಂದು ಸ್ಥಳೀಯರು ದೂರಿದ್ದಾರೆ. ಅದೇ ವೇಳೆ ತುಂತುರು ಮಳೆಯು ಸಹ ಅಪಘಾತಕ್ಕೆ ಕಾರಣವಾಯಿತೆಂಬ ಅನುಮಾನ ವ್ಯಕ್ತವಾಗಿದೆ. ಅಂಧಕಾರದಲ್ಲಿ ಲಾರಿ ನಿಲ್ಲಿಸಿದ್ದುದನ್ನು ಗಮನಿಸದ ಸುದೀಪ್ ಚಲಾಯಿಸುತ್ತಿದ್ದ ಬೈಕು ನೇರವಾಗಿ ಲಾರಿಗೆ ಹಿಂಬದಿಯಿಂದ ಢಿಕ್ಕಿ ಹೊಡೆದಿದ್ದು, ಅಪಘಾತದ ತೀವ್ರತೆಗೆ ಅವರು ರಸ್ತೆಗೆ ಎಸೆಯಲ್ಪಟ್ಟಿದ್ದಾರೆ.

ತಲೆಗೆ ಗಂಭೀರ ಗಾಯವಾಗಿದ್ದ ಸುದೀಪ್ ಅವರನ್ನು ತಕ್ಷಣವೇ ಪುತ್ತೂರಿನ ಆಸ್ಪತ್ರೆಗೆ ಕರೆದೊಯ್ಯಲಾಯಿತು. ಆದರೆ ಚಿಕಿತ್ಸೆ ಫಲಕಾರಿಯಾಗದೆ ಅವರು ಕೊನೆಯುಸಿರೆಳೆದಿದ್ದಾರೆ.

ಸುದೀಪ್ ಬಂಟ್ವಾಳ ತಾಲೂಕಿನ ನೇರಳಕಟ್ಟೆಯಲ್ಲಿ ಇರುವ ತಮ್ಮ ಸಹೋದರಿಯ ಮನೆಗೆ ಹೋಗುತ್ತಿದ್ದ ವೇಳೆ ಈ ದುರಂತ ಸಂಭವಿಸಿದೆ. ಘಟನಾ ಸ್ಥಳಕ್ಕೆ ಪುತ್ತೂರು ಸಂಚಾರಿ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಪ್ರಕರಣ ದಾಖಲಿಸಿಕೊಂಡು ತನಿಖೆ ಆರಂಭಿಸಿದ್ದಾರೆ.

  •  

Leave a Reply

You May Have Missed

error: Content is protected !!