ಕೋಡಿಂಬಾಳ: ರೈಲ್ವೇ ಹಳಿಯ ಬಳಿ ವ್ಯಕ್ತಿಗೆ ಪೆಟ್ರೋಲ್ ಸುರಿದು ಬೆಂಕಿ : ಗಂಭೀರ ಗಾಯ, ಆಸ್ಪತ್ರೆಗೆ ದಾಖಲು

Ichilampady

ಕೋಡಿಂಬಾಳ: ರೈಲ್ವೇ ಹಳಿಯ ಬಳಿ ವ್ಯಕ್ತಿಗೆ ಪೆಟ್ರೋಲ್ ಸುರಿದು ಬೆಂಕಿ : ಗಂಭೀರ ಗಾಯ, ಆಸ್ಪತ್ರೆಗೆ ದಾಖಲು

ಕಡಬ: ತನ್ನದೇ ಸಹೋದರನನ್ನು ರೈಲ್ವೇ ಹಳಿಯಲ್ಲಿ ಬೆನ್ನಟ್ಟಿ ಪೆಟ್ರೋಲ್ ಸುರಿದು ಬೆಂಕಿ ಹಚ್ಚಿ ಜೀವಂತವಾಗಿ ಸುಟ್ಟು ಹಾಕಲು ಯತ್ನಿಸಿದ ಹೃದಯವಿದ್ರಾವಕ ಘಟನೆ ಕಡಬ ತಾಲೂಕಿನ ಕೋಡಿಂಬಾಳದ ಕೊರಿಯರ್ ಬಳಿಯಲ್ಲಿ ನಡೆದಿದೆ. ತೀವ್ರವಾಗಿ ಸುಟ್ಟ ಗಾಯಗಳೊಂದಿಗೆ 45 ವರ್ಷದ ಹನುಮಪ್ಪ ಎಂಬವರು ಆಸ್ಪತ್ರೆಯಲ್ಲಿ ಆಸ್ಪತ್ರೆಗೆ ದಾಖಲಿಸಲಾಗಿದ್ದಾರೆ.

ಮೂಲತಃ ಗದಗ ಜಿಲ್ಲೆಯವರು ಆಗಿರುವ ಹನುಮಪ್ಪ ಹಾಗೂ ಅವರ ತಮ್ಮ ನಿಂಗಪ್ಪ, ಪುತ್ತೂರಿನಲ್ಲಿ ಕಾರ್ಮಿಕರಾಗಿ ಉದ್ಯೋಗ ಮಾಡುತ್ತಿದ್ದರು. ಜೂ.8ರ ಮಧ್ಯಾಹ್ನ, ಮಂಗಳೂರು-ಬೆಂಗಳೂರು ರೈಲು ಮಾರ್ಗದ ಪ್ಯಾಸೆಂಜರ್ ರೈಲಿನಲ್ಲಿ ಇಬ್ಬರೂ ಪ್ರಯಾಣ ಮಾಡುತ್ತಿದ್ದು, ಬಜಕರೆ ರೈಲು ನಿಲ್ದಾಣದಲ್ಲಿ ಇಳಿದಿದ್ದಾರೆ.

ರೈಲು ಸಾಗಿದ ನಂತರ, ಸುಮಾರು 500 ಮೀಟರ್ ದೂರಕ್ಕೆ ಹನುಮಪ್ಪನನ್ನು ಕರೆದುಕೊಂಡು ಹೋಗಿದ ತಮ್ಮ ನಿಂಗಪ್ಪ, ಕೈಯಲ್ಲಿದ್ದ ಪೆಟ್ರೋಲ್ ಅನ್ನು ಏಕಾಏಕಿ ಹನುಮಪ್ಪನ ಮೈಮೇಲೆ ಸುರಿದು ಬೆಂಕಿ ಹಚ್ಚಿರುವುದಾಗಿ ತಿಳಿದು ಬಂದಿದೆ. ಬೆಂಕಿ ತಗುಲುತ್ತಿದ್ದಂತೆ ಗಂಭೀರವಾಗಿ ಸುಟ್ಟ ಹನುಮಪ್ಪ ಕಿರಿಚಿದಾಗ ಸ್ಥಳೀಯರು ಧಾವಿಸಿ ಪರಿಸ್ಥಿತಿಯನ್ನು ಗಮನಿಸಿದ್ದಾರೆ.

ಗಾಯಾಳುವನ್ನು ತಕ್ಷಣವೇ ಕಡಬ ಸಮುದಾಯ ಆರೋಗ್ಯ ಕೇಂದ್ರಕ್ಕೆ ಸಾಗಿಸಲಾಯಿತು. ಸ್ಥಳೀಯ ವೈದ್ಯರು ಚಿಕಿತ್ಸೆ ನೀಡಿದ್ದು, ಹೆಚ್ಚಿನ ಚಿಕಿತ್ಸೆಗೆ ಮಂಗಳೂರಿಗೆ ಕರೆದೊಯ್ಯಲು ತಯಾರಿ ನಡೆಸಲಾಗಿದೆ.

ಕಡಬ ಪೊಲೀಸರು ಕೂಡಲೇ ಸ್ಥಳಕ್ಕೆ ಧಾವಿಸಿ ಆರೋಪಿ ನಿಂಗಪ್ಪನನ್ನು ವಶಕ್ಕೆ ಪಡೆದಿದ್ದಾರೆ. ರೈಲ್ವೇ ಹಳಿಯಲ್ಲಿ ಈ ಘಟನೆ ಸಂಭವಿಸಿದ್ದರಿಂದ ಪ್ರಕರಣವನ್ನು ರೈಲ್ವೇ ಪೊಲೀಸ್ ಇಲಾಖೆಗೆ ಹಸ್ತಾಂತರಿಸುವ ಸಾಧ್ಯತೆಗಳಿವೆ ಎಂದು ತಿಳಿದು ಬಂದಿದೆ.

  •  

Leave a Reply

You May Have Missed

error: Content is protected !!