ಕೊಕ್ಕಡ ಸಂಗಮ್ ಯುವಕ ಮಂಡಲದ 44ನೇ ಶ್ರೀಕೃಷ್ಣ ಜನ್ಮಾಷ್ಟಮಿ “ಕ್ರೀಡೋತ್ಸವ”


ಕೊಕ್ಕಡ: ಸಂಗಮ್ ಯುವಕ ಮಂಡಲ ಕೊಕ್ಕಡ ಇದರ ಆಶ್ರಯದಲ್ಲಿ 44ನೇ ವರ್ಷದ ಶ್ರೀಕೃಷ್ಣ ಜನ್ಮಾಷ್ಟಮಿ ಪ್ರಯುಕ್ತ ಆಯೋಜಿಸಲಾದ “ಕ್ರೀಡೋತ್ಸವ – 2025” ರವಿವಾರ ಕೊಕ್ಕಡ ಶಾಲಾ ಮೈದಾನದಲ್ಲಿ ಜರಗಿತು. ಸಕಲ ವಯೋಮಾನದ ಜನರನ್ನು ಕ್ರೀಡಾಕೂಟದಲ್ಲಿ ತೊಡಗಿಸುವ ಮೂಲಕ ಹಬ್ಬದ ಸಂಭ್ರಮಕ್ಕೆ ಕ್ರೀಡಾ ಮೆರಗು ತುಂಬಲಾಯಿತು.

ಕೊಕ್ಕಡ ಗ್ರಾಮ ಪಂಚಾಯಿತಿನ ಅಧ್ಯಕ್ಷೆ ಬೇಬಿ ಕಾರ್ಯಕ್ರಮವನ್ನು ಉದ್ಘಾಟಿಸಿ ಕ್ರೀಡೋತ್ಸವಕ್ಕೆ ಶುಭ ಕೋರಿದರು.
ಸೌತಡ್ಕ ಮಹಾಗಣಪತಿ ಕ್ಷೇತ್ರದ ಆಡಳಿತ ಸಮಿತಿ ಅಧ್ಯಕ್ಷ ಸುಬ್ರಮಣ್ಯ ಶಬರಾಯ ಅವರು ಮಾತನಾಡಿ ಗ್ರಾಮೀಣ ಕ್ರೀಡೆಗಳು ಸಮಾಜದಲ್ಲಿ ಒಗ್ಗಟ್ಟನ್ನು ತರುತ್ತವೆ. ಇಂತಹ ಕಾರ್ಯಕ್ರಮಗಳು ಹೊಸ ತಲೆಮಾರಿಗೆ ಗ್ರಾಮೀಣ ಆಟಗಳ ಪರಿಚಯ ಮಾಡಿಕೊಡುವುದರೊಂದಿಗೆ, ಹಳ್ಳಿಯ ಕ್ರೀಡಾಸಂಸ್ಕೃತಿಯನ್ನು ಕಾಪಾಡುವ ಜವಾಬ್ದಾರಿಯನ್ನು ಹೊರುತ್ತವೆ ಎಂದು ಶ್ಲಾಘಿಸಿದರು.
ವೇದಿಕೆಯಲ್ಲಿ ಅತಿಥಿಗಳಾಗಿ ಸಮೂಹ ಸಂಪನ್ಮೂಲ ವ್ಯಕ್ತಿ ವಿಲ್ಫ್ರೆಡ್ ಪಿಂಟೋ, ಗಿರೀಶ್ ಶಬರಾಡಿ, ರಾಜೇಂದ್ರ ಸಂಗಮ್, ರಾಜಗೋಪಾಲ್ ಬೆನಕ, ಸಂಗಮ್ ಯುವಕ ಮಂಡಲದ ಅಧ್ಯಕ್ಷ ಹಕೀಮ್ ಎಸ್ ಕೆ, ಕಾಂಟ್ರಾಕ್ಟರ್ ಉಮ್ಮರ್ ಬೈಲಂಗಡಿ, ಸುನೀಶ್ ನಾಯ್ಕ್ ಉಪಸ್ಥಿತರಿದ್ದರು.
ಸಾರ್ವಜನಿಕವಾಗಿ ಪುರುಷರಿಗೆ, ಮಹಿಳೆಯರಿಗೆ ಹಾಗೂ ಮಕ್ಕಳಿಗೆ ವಿವಿಧ ಆಟೋಟ ಸ್ಪರ್ಧೆಗಳನ್ನು ನಡೆಸಲಾಯಿತು.
ಸಂಜೆ ನಡೆದ ಸಮಾರೋಪ ಸಮಾರಂಭದಲ್ಲಿ ಅತಿಥಿಗಳಾಗಿ ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ರಕ್ಷಿತ್ ಶಿವರಾಂ ಮಾತನಾಡಿ ಇಂದಿನ ಮಕ್ಕಳನ್ನು ಕ್ರೀಡಾಂಗಣಕ್ಕೆ ತರುವ ಕೆಲಸ ಯುವಕ ಮಂಡಲಗಳು ಮಾಡುತ್ತಿರುವುದು ಶ್ಲಾಘನೀಯ. ಕ್ರೀಡೆಗಳು ಮಾನಸಿಕ-ಶಾರೀರಿಕ ಆರೋಗ್ಯವನ್ನು ಹೆಚ್ಚಿಸಿ, ಸಮಾಜದಲ್ಲಿ ಸಹಕಾರ, ಸೋಲು-ಜಯಗಳ ಸ್ವೀಕಾರದ ಮನೋಭಾವ ಬೆಳೆಸುತ್ತವೆ ಎಂದು ಹೇಳಿದರು.
ನಾಗೇಶ್ ಕುಮಾರ್ ಸ್ವಾಮಿಪ್ರಸಾದ್, ಉದ್ಯಮಿಗಳಾದ ಪ್ರವೀಣ್ ಹಳ್ಳಿಮನೆ, ಪಿ.ಟಿ. ಸೆಬಾಸ್ಟಿನ್, ಅಶ್ರಫ್ ಎ1, ಸೌತಡ್ಕ ಮಹಾಗಣಪತಿ ಕ್ಷೇತ್ರದ ಆಡಳಿತ ಸಮಿತಿಯ ಸದಸ್ಯ ಗಣೇಶ್ ಕಾಶಿ, ಸಚಿನ್ ನಾಯ್ಕ್, ದಯಾನೀಶ್ ಕೊಕ್ಕಡ, ಗಣೇಶ್ ಕಲಾಯಿ ಹಾಗೂ ವಿಜಯ್ ವಿಕ್ರಂ ಉಪಸ್ಥಿತರಿದ್ದರು.
ವಿಜೇತರಿಗೆಬಹುಮಾನ ವಿತರಿಸಲಾಯಿತು. ಸಂಗಮ್ ಯುವಕ ಮಂಡಲದ ಅಧ್ಯಕ್ಷ ಹಕೀಮ್ ಎಸ್ ಕೆ ಸ್ವಾಗತಿಸಿ, ರಾಜಗೋಪಾಲ್ ಬೆನಕ ಕಾರ್ಯಕ್ರಮ ನಿರೂಪಿಸಿದರು. ಕಲಂದರ್ ವಂದಿಸಿದರು.





















Leave a Reply