ನೆಲ್ಯಾಡಿ ಸಂತ ಜಾರ್ಜ್ ವಿದ್ಯಾಸಂಸ್ಥೆಯಲ್ಲಿ ಓಣಂ ಸಂಭ್ರಮ


ನೆಲ್ಯಾಡಿ ಸಂತ ಜಾರ್ಜ್ ವಿದ್ಯಾಸಂಸ್ಥೆಯಲ್ಲಿ ಶುಕ್ರವಾರ ದಂದು ಓಣಂ ಹಬ್ಬವನ್ನು ವೈಭವೋಪೇತವಾಗಿ ಆಚರಿಸಲಾಯಿತು.
ಸಂಸ್ಥೆಯ ಕಾರ್ಯದರ್ಶಿ ಫಾ.ಅನೀಶ್ ಪಾರಶೇರಿಲ್ ದೀಪ ಬೆಳಗಿಸಿ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಅವರು ಓಣಂ ಹಬ್ಬವು ಕೇವಲ ಕೇರಳ ರಾಜ್ಯದ ಹಬ್ಬವಲ್ಲ, ಇದು ನಮ್ಮೆಲ್ಲರ ಹಬ್ಬ. ಜನರ ಒಗ್ಗಟ್ಟು, ಪ್ರೀತಿ ಮತ್ತು ಸಹಬಾಳ್ವೆಯ ಸಂಕೇತವಾಗಿದೆ. ಮಹಾಬಲಿ ಚಕ್ರವರ್ತಿಯ ಸ್ಮರಣಾರ್ಥವಾಗಿ ಈ ಹಬ್ಬವನ್ನು ಆಚರಿಸಲಾಗುತ್ತದೆ, ಅವರು ಸಮಾನತೆ ಮತ್ತು ನ್ಯಾಯದ ಸಂಕೇತ. ಓಣಂ ಹಬ್ಬವು ಮೇಲುಕೀಳು, ಜಾತಿ-ಮತ ಭೇದಗಳನ್ನು ತೊರೆದು ಎಲ್ಲರೂ ಒಂದೇ ಸಮಾನ ಎಂಬ ಸಂದೇಶವನ್ನು ನೀಡುತ್ತದೆ. ಹೂವುಗಳ ಅಲಂಕಾರ (ಪೂಕಳಂ), ವಿವಿಧ ಆಟಗಳು, ನೃತ್ಯ-ಸಂಗೀತ ಕಾರ್ಯಕ್ರಮಗಳು ಮತ್ತು ಓಣಂ ಸದ್ಯ ಈ ಹಬ್ಬದ ವೈಶಿಷ್ಟ್ಯ. ಸಂತೋಷ, ಹರ್ಷೋಲ್ಲಾಸ ಮತ್ತು ಸಮೃದ್ಧಿಯಿಂದ ಜೀವನವನ್ನು ಸುಂದರಗೊಳಿಸುವ ಪ್ರೇರಣೆಯನ್ನು ಈ ಹಬ್ಬ ನೀಡುತ್ತದೆ ಎಂದು ಹೇಳಿದರು.

ವೇದಿಕೆಯಲ್ಲಿ ಸಂಚಾಲಕರಾದ ಫಾ.ನೋಮಿಸ್ ಕುರಿಯಾಕೋಸ್, ಪ್ರಾಚಾರ್ಯ ಎಂ.ಕೆ. ಏಲಿಯಾಸ್, ಪ್ರೌಢಶಾಲಾ ಮುಖ್ಯಸ್ಥ ಎಂ.ಐ. ತೋಮಸ್, ಹರಿಪ್ರಸಾದ್ ಕೆ. ಉಪಸ್ಥಿತರಿದ್ದರು.

ವಿದ್ಯಾರ್ಥಿಗಳು, ಶಿಕ್ಷಕರು, ಸಿಬ್ಬಂದಿಗಳಿಗಾಗಿ ವಿವಿಧ ರೀತಿಯ ಆಟೋ ಸ್ಪರ್ಧೆಗಳು ಆಯೋಜಿಸಲಾಗಿತ್ತು. ಶಿಕ್ಷಕರು, ವಿದ್ಯಾರ್ಥಿಗಳು ಓಣಂ ಸಾಂಪ್ರದಾಯಿಕ ಉಡುಗೆಗಳನ್ನು ತೊಟ್ಟು ಸಂಭ್ರಮಿಸಿದರು. ಸಂಸ್ಥೆಯ ಸ್ಥಾಪಕ ಕಾರ್ಯದರ್ಶಿ ಅಬ್ರಹಾಂ ವರ್ಗೀಸ್, ಕೋಶಾಧಿಕಾರಿ ಪಿ.ಪಿ.ವರ್ಗೀಸ್ ಹಾಗೂ ನಿವೃತ್ತ ದೈಹಿಕ ಶಿಕ್ಷಕ ಉಲಹನ್ನಾನ್ ಪಿ.ಎಂ. ಮೊದಲಾದವರು ಭಾಗವಹಿಸಿದರು.
ಆಗಮಿಸಿದ ಎಲ್ಲರಿಗೂ ಓಣಂ ಹಬ್ಬದ ಪಾರಂಪರಿಕ ಖಾದ್ಯ ತಯಾರಿಸಿ ಉಣಬಡಿಸಲಾಯಿತು. ಫಾ.ನೋಮಿಸ್ ಕುರಿಯಾಕೋಸ್ ಸ್ವಾಗತಿಸಿದರು, ಉಪನ್ಯಾಸಕ ವಿಶ್ವನಾಥ ಶೆಟ್ಟಿ ಕೆ ಕಾರ್ಯಕ್ರಮ ನಿರೂಪಿಸಿ ವಂದಿಸಿದರು.





















Leave a Reply