ಚಂಡಿಕಾಯಾಗ ದುರ್ಗಾದೇವಿಯ ಸಂತೃಪ್ತಿಗೆ ಮಾಡಿದಂತ ಯಾಗ – ಶ್ರೀ ವಿದ್ಯಾಪ್ರಸನ್ನ ತೀರ್ಥ ಶ್ರೀಪಾದರು

ಚಂಡಿಕಾಯಾಗ ದುರ್ಗಾದೇವಿಯ ಸಂತೃಪ್ತಿಗೆ ಮಾಡಿದಂತ ಯಾಗ – ಶ್ರೀ ವಿದ್ಯಾಪ್ರಸನ್ನ ತೀರ್ಥ ಶ್ರೀಪಾದರು

ನೇಸರ ಮೇ‌.3: ಶ್ರೀ ವನದುರ್ಗಾ ದೇವಸ್ಥಾನ ಅರಿಕೆಗುಡ್ಡೆ ಇಲ್ಲಿ ಕ್ಷೇತ್ರ ಸಾನಿಧ್ಯ ಮತ್ತು ಲೋಕಕಲ್ಯಾಣಾರ್ಥ ನವಚಂಡಿಕಾಯಾಗ ಪೊಳಲಿ ಶ್ರೀ ಸುಬ್ರಹ್ಮಣ್ಯ ತಂತ್ರಿಗಳ ನೇತೃತ್ವದಲ್ಲಿ, ಸುಬ್ರಹ್ಮಣ್ಯ ಮಠದ ಶ್ರೀ ವಿದ್ಯಾಪ್ರಸನ್ನ ತೀರ್ಥ ಶ್ರೀಪಾದರ ದಿವ್ಯ ಉಪಸ್ಥಿತಿಯಲ್ಲಿ ಮೇ.3 ರಂದು ಜರುಗಿತು.

ಆ ಪ್ರಯುಕ್ತ ನಡೆದ ಧಾರ್ಮಿಕ ಸಭೆಯಲ್ಲಿ ಸುಬ್ರಹ್ಮಣ್ಯ ಮಠದ ಶ್ರೀ ವಿದ್ಯಾಪ್ರಸನ್ನ ತೀರ್ಥ ಶ್ರೀಪಾದರು ಆಶೀರ್ವಚನ ನೀಡಿ ಮಾತನಾಡಿದ ಅವರು ಈ ಪ್ರಪಂಚದ ಎಲ್ಲಾ ಸೃಷ್ಟಿಯು ಭಗವಂತನ ಕೊಡುಗೆಯಾಗಿದೆ, ನಾವೆಲ್ಲರೂ ಈ ಪ್ರಕೃತಿಯ ಮೇಲೆ ದೊಡ್ಡ ಅಧಿಕಾರ ಚಲಾಯಿಸುವ ಹಾಗಿಲ್ಲ. ನಮ್ಮೆಲ್ಲರ ಬದುಕು ಪಂಚಭೂತಗಳ ಮೇಲೆ ಅವಲಂಬಿತವಾಗಿದೆ, ಈ ಪ್ರಪಂಚದಲ್ಲಿ ಮಣ್ಣು, ನೀರು, ಗಾಳಿ, ಸೂರ್ಯನ ಬೆಳಕು ಮುಂತಾದುವುಗಳು ಇಲ್ಲದಿದ್ದರೆ ಬದುಕಲು ಸಾಧ್ಯವಿರುತ್ತಿರಲಿಲ್ಲ. ಪ್ರಕೃತಿಯಲ್ಲಿ ಏನೇ ಆದರೂ ಅದು ನಮ್ಮದಲ್ಲ ಭಗವಂತನ ಕೊಡುಗೆ. ಭಗವಂತನ ಕೊಡುಗೆಯನ್ನು ನಾವು ಭಗವಂತನಿಗೆ ಅರ್ಪಿಸದೇ ಇದ್ದರೆ ಹೇಗೆ ಸಾಧ್ಯ. ಭಗವಂತನು ಸರ್ವ ಸಂಪನ್ನನೂ ಆಗಿದ್ದಾನೆ. ಅಗ್ನಿ ಎಂಬುದು ಭಗವಂತನ ಅತ್ಯಂತ ಪವಿತ್ರವಾದ ಪ್ರತೀಕ, ಇದರಲ್ಲಿ ಏನಾದರೂ ಆಹುತಿ ಕೊಟ್ಟರೆ ಅದು ಭಗವಂತನಿಗೆ ತಲುಪುತ್ತದೆ. ಆದುದರಿಂದ ಅಗ್ನಿ ಮೂಲಕ ಭಗವಂತನ ಪೂಜೆ ಮಾಡಬೇಕು. ಚಂಡಿಕಾಯಾಗ ಎಂಬುದು ದುರ್ಗಾದೇವಿಯ ಸಂತೃಪ್ತಿಗೆ ಮಾಡಿದಂತ ಯಾಗ ಎಂದರು. ಜೀರ್ಣೋದ್ಧಾರ ಸಮಿತಿ ಅಧ್ಯಕ್ಷ ಪ್ರಕಾಶ್ ಪಿಲಿಕ್ಕಬೆ ಅಧ್ಯಕ್ಷತೆಯನ್ನು ವಹಿಸಿದ್ದರು. ವೇದಿಕೆಯಲ್ಲಿ ಕಳೆಂಜ ದೇವಸ್ಥಾನದ ಅಧ್ಯಕ್ಷ ಶ್ರೀಧರ್ ರಾವ್ ಕಾಯಡ, ಶ್ರೀಕರ್ ರಾವ್ ಅಡ್ಕಾಡಿ, ಹತ್ಯಡ್ಕ ಸಹಕಾರಿ ಸಂಘದ ಉಪಾಧ್ಯಕ್ಷ ರಾಜು ಕೆ ಸಾಲಿಯಾನ್, ಅರಸಿನಮಕ್ಕಿ ಗ್ರಾ.ಪಂ ಉಪಾಧ್ಯಕ್ಷೆ ಶಕುಂತಲಾ ಆಚಾರ್ಯ ಉಪಸ್ಥಿತರಿದ್ದರು.

ಬೆಳ್ತಂಗಡಿ ಶಾಸಕ ಹರೀಶ್ ಪೂಂಜ, ಬೆಳ್ತಂಗಡಿ ಬಿಜೆಪಿ ಮಂಡಲ ಅಧ್ಯಕ್ಷರಾದ ಜಯಂತ್ ಕೋಟ್ಯಾನ್, ಉಪಾಧ್ಯಕ್ಷರಾದ ಸೀತಾರಾಮ್ ಬಿ ಎಸ್ ಕಾರ್ಯಕ್ರಮಕ್ಕೆ ಆಗಮಿಸಿ ಶ್ರೀ ದೇವರ ಪ್ರಸಾದ ಸ್ವೀಕರಿಸಿದರು.

ಸಭಾ ಕಾರ್ಯಕ್ರಮದ ಬಳಿಕ ಸ್ಥಳೀಯರಿಂದ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಿತು. ಜೀರ್ಣೋದ್ಧಾರ ಸಮಿತಿಯ ಕಾರ್ಯದರ್ಶಿ ಮುರಳೀಧರ ಶೆಟ್ಟಿಗಾರ್ ಸ್ವಾಗತಿಸಿ, ಶ್ರೀಮತಿ ಕವಿತಾ ಧನ್ಯವಾದ ನೀಡಿದರು.ಜೀರ್ಣೋದ್ಧಾರ ಸಮಿತಿ ಉಪಾಧ್ಯಕ್ಷ ವೃಷಾಂಕ್ ಖಾಡಿಲ್ಕರ್ ಕಾರ್ಯಕ್ರಮ ನಿರ್ವಹಿಸಿದರು.

🌺 ಜಾಹೀರಾತು 🌺

Leave a Reply

You May Have Missed

error: Content is protected !!