ಶಿಕ್ಷಕರ ದಿನಾಚರಣೆ ಅಂಗವಾಗಿ ಆಚಾರ್ಯಾಚರಣೆ

ಶಿಕ್ಷಕರ ದಿನಾಚರಣೆ ಅಂಗವಾಗಿ ಆಚಾರ್ಯಾಚರಣೆ

ನೇಸರ ಸೆ.04: ಶಿಕ್ಷಕರ ದಿನಾಚರಣೆಯ ಶುಭಾವಸರದಲ್ಲಿ ಉಜಿರೆಯ ಎಸ್.ಡಿ.ಎಂ. ಸ್ವಾಯತ್ತ ಕಾಲೇಜಿನ ಸ್ನಾತಕೋತ್ತರ ಮನಃಶಾಸ್ತ್ರ ಮತ್ತು ಸಂಶೋಧನಾ ವಿಭಾಗದ ಪ್ರಾಧ್ಯಾಪಕರು ಮತ್ತು ವಿದ್ಯಾರ್ಥಿಗಳ ನೇತೃತ್ವದಲ್ಲಿ ಕನ್ಯಾಡಿಯಲ್ಲಿರುವ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಮಕ್ಕಳ ಪಯಣ ಮಕ್ಕಳ ಕಡೆಗೆ ತತ್ವದಡಿ ‘ಆಚಾರ್ಯಾಚರಣೆ’ ಎಂಬ ವಿಶಿಷ್ಠ ಕಾರ್ಯಕ್ರಮವನ್ನು ಆಯೋಜಿಸಲಾಯಿತು.
ಮನಃಶಾಸ್ತ್ರ, ಸ್ನಾತಕೋತ್ತರ ಪದವಿಯ ಪ್ರಥಮ ವರ್ಷದ ವಿದ್ಯಾರ್ಥಿಗಳು ಶಾಲೆಯಲ್ಲಿ ಒಂದನೆ ತರಗತಿಯಿಂದ ಎಂಟನೆ ತರಗತಿ ವರೆಗಿನ ವಿದ್ಯಾರ್ಥಿಗಳಿಗೆ ಶಿಕ್ಷಕರಾದರು.
ವಿದ್ಯಾರ್ಥಿಗಳ ಜತೆ ಮುಕ್ತವಾಗಿ ಬೆರೆತು ಮಾತುಕತೆ, ಆಪ್ತಸಲಹೆ, ಗುಂಪುಚರ್ಚೆ, ಪ್ರಶ್ನೋತ್ತರ ಇತ್ಯಾದಿ ಹತ್ತು-ಹಲವು ಚಟುವಟಿಕೆಗಳ ಮೂಲಕ ಪುಟ್ಟ ಮಕ್ಕಳಲ್ಲಿರುವ ಸುಪ್ತ ಪ್ರತಿಭೆಗಳ ಅಭಿವ್ಯಕ್ತಿಗೆ ಅವಕಾಶ ನೀಡಿದರು. ಚಿತ್ರಕಲೆ, ನಾಯಕತ್ವ ಗುಣ, ಸಮೂಹ ಜೀವನ, ಶಿಸ್ತು, ಪಠ್ಯ ಹಾಗೂ ಪಠ್ಯೇತರ ಚಟುವಟಿಕೆಗಳ ಬಗ್ಯೆ ಮಕ್ಕಳು ಮುಕ್ತವಾಗಿ ತಮ್ಮ ಅಭಿಪ್ರಾಯ, ಅನಿಸಿಕೆ ವ್ಯಕ್ತ ಪಡಿಸಿದರು. ಮನಃಶಾಸ್ತ್ರ ಸ್ನಾತಕೋತ್ತರ ಅಧ್ಯಯನ ಕೇಂದ್ರದ ಉಪನ್ಯಾಸಕರಾದ ಕಾರ್ಯಕ್ರಮ ಸಂಯೋಜಕಿ ಅಶ್ವಿನಿ ಶೆಟ್ಟಿ ಮತ್ತು ಅಶ್ವಿನಿ ವಿನೋಬ ಕಾರಂತ್ ಉಪಸ್ಥಿತರಿದ್ದರು. ಶಾಲಾ ಮುಖ್ಯೋಪಾಧ್ಯಾಯಿನಿ ಫ್ಲೇವಿಯಾ ಡಿ’ಸೋಜ ಸಹಕರಿಸಿದರು.

Leave a Reply

You May Have Missed

error: Content is protected !!