“ಆಟಿದ ನೆಂಪುಡು ಸೋಣದ ಪೊಲಬು” – ನೆಲ್ಯಾಡಿ ಸಂತ ಜಾರ್ಜ್ ಕಾಲೇಜಿನಲ್ಲಿ ಸಂಪ್ರದಾಯ-ಸಮುದಾಯ-ಸಹಭಾಗಿತ್ವದ ಆಟಿ ಕೂಟ

Nellyadi

“ಆಟಿದ ನೆಂಪುಡು ಸೋಣದ ಪೊಲಬು” – ನೆಲ್ಯಾಡಿ ಸಂತ ಜಾರ್ಜ್ ಕಾಲೇಜಿನಲ್ಲಿ ಸಂಪ್ರದಾಯ-ಸಮುದಾಯ-ಸಹಭಾಗಿತ್ವದ ಆಟಿ ಕೂಟ

ನೆಲ್ಯಾಡಿ: ತುಳುನಾಡಿನ ಸಂಸ್ಕೃತಿಯಲ್ಲಿ “ಆಟಿದ ತಿಂಗಳು” ಎಂದರೆ ವಿಶಿಷ್ಟವಾದ ನೆನಪು. ಕರ್ಕಾಟಕ ಮಾಸವನ್ನು ಜನರು ಸಾಮಾನ್ಯವಾಗಿ ಬಡತನದ ತಿಂಗಳು ಎಂದು ಕರೆಯುತ್ತಾರೆ. ಏಕೆಂದರೆ ಆ ವೇಳೆಗೆ ಭತ್ತದ ಬೆಳೆ ಇನ್ನೂ ಗದ್ದೆಯಲ್ಲಿ ಬಾಳುತ್ತಿದೆ, ತರಕಾರಿ ಬೆಳೆಗಳು ಸಿಗುವುದಿಲ್ಲ. ಆದರೆ ಈ “ಬಡತನ” ಎಂಬ ಅರ್ಥದ ಹಿಂದೆ ಒಂದು ಆಳವಾದ ಜೀವನ ತತ್ತ್ವವಿದೆ. ಇರುವುದರಲ್ಲಿ ತೃಪ್ತಿಯಿಂದ ಬದುಕುವುದು, ಮನೆಯ ಹಿತ್ತಲಲ್ಲಿ ಸಿಗುವ ಸೊಪ್ಪು, ಹಲಸು, ಬಳ್ಳಿ ಕೆಸು, ತಜಂಕು ಸೊಪ್ಪು, ಮಾವಿನ ಉಪ್ಪಿನಕಾಯಿ ಮೊದಲಾದ ಪ್ರಕೃತಿಯ ವರದಾನಗಳನ್ನು ಪಾಕವಿಧಾನಗಳಲ್ಲಿ ಬಳಸುವುದು – ಇದಾಗಿದೆ ಆಟಿಯ ನಿಜವಾದ ಅರ್ಥ.

ಈ ಸಂಪ್ರದಾಯವನ್ನು ವಿದ್ಯಾರ್ಥಿಗಳಿಗೆ ಪರಿಚಯಿಸಲು ನೆಲ್ಯಾಡಿ ಸಂತ ಜಾರ್ಜ್ ಪದವಿಪೂರ್ವ ಕಾಲೇಜಿನ ರಾಷ್ಟ್ರೀಯ ಸೇವಾ ಯೋಜನೆ ಎನ್‌ಎಸ್‌ಎಸ್ ಘಟಕ ಶನಿವಾರದಂದು “ಆಟಿದ ನೆಂಪುಡು ಸೋಣದ ಪೊಲಬು” ಎಂಬ ವಿಶಿಷ್ಟ ಕಾರ್ಯಕ್ರಮವನ್ನು ಆಯೋಜಿಸಿತು. ಗ್ರಾಮೀಣ ನೆಲೆಯ ಪಾರಂಪರಿಕ ಸಂಸ್ಕೃತಿಯ ಮೆಲುಕು ಹಾಕಿದ ಈ ಕೂಟದಲ್ಲಿ ವಿದ್ಯಾರ್ಥಿಗಳು, ಶಿಕ್ಷಕರು ಮತ್ತು ಪೋಷಕರು ಕೈಜೋಡಿಸಿ ಅನನ್ಯ ಅನುಭವವನ್ನು ಹಂಚಿಕೊಂಡರು.

ಆಟಿಯ ಸಂಪ್ರದಾಯದ ಪಾಠ
ಆಟಿಯ ತಿಂಗಳು ಬಡತನದ ಸಂಕೇತವಲ್ಲ, ಅದು ಬದುಕಿನ ಪಾಠ. ಅಲ್ಪದಲ್ಲೂ ಸಮೃದ್ಧಿಯನ್ನು ಕಾಣುವುದು, ಸರಳ ಜೀವನವನ್ನು ಅಳವಡಿಸಿಕೊಳ್ಳುವುದು, ಆರೋಗ್ಯಕರ ಆಹಾರ ಪದ್ಧತಿಯನ್ನು ಪಾಲಿಸುವುದು – ಇವುಗಳೆಲ್ಲ ಆಟಿ ತಿಂಗಳ ಮೂಲಕ ಗ್ರಾಮೀಣ ಸಮಾಜ ಕಲಿತುಕೊಂಡಿರುವುದು. ಈ ಹಿನ್ನೆಲೆ ಇರುವುದರಲ್ಲಿ ತೃಪ್ತಿಯಿಂದ, ಆರೋಗ್ಯವಂತರಾಗಿ ಹೇಗೆ ಬದುಕಬೇಕು ಎಂಬ ಅರಿವು ಮೂಡಿಸುವುದು ಮುಖ್ಯ ಗುರಿಯಾಗಿತ್ತು. ತಲೆಮಾರಿನಿಂದ ಬಂದ ಈ ಪದ್ಧತಿಯನ್ನು ಶಾಲಾ ಮಟ್ಟದಲ್ಲಿ ವಿದ್ಯಾರ್ಥಿಗಳಿಗೆ ಹಳೆಯ ಸಂಪ್ರದಾಯದ ಅರ್ಥ ತಿಳಿಸುವ ಉದ್ದೇಶದಿಂದ ಕಾರ್ಯಕ್ರಮ ನಡೆಯಿತು.

50ಕ್ಕೂ ಹೆಚ್ಚು ಆಟಿ ತಿನಿಸುಗಳು
ಎನ್‌ಎಸ್‌ಎಸ್ ಸ್ವಯಂಸೇವಕರು ಹಾಗೂ ಪೋಷಕರ ನೆರವಿನಿಂದ ಮನೆಯಿಂದ ತಂದು ಸಿದ್ಧಪಡಿಸಿದ 50ಕ್ಕೂ ಹೆಚ್ಚು ಆಟಿಯ ವಿಶೇಷ ತಿಂಡಿಗಳು ಕಾರ್ಯಕ್ರಮದ ಆಕರ್ಷಣೆಯಾಗಿತ್ತು. ತಜಂಕು ಸೊಪ್ಪಿನ ಪಲ್ಯ, ಹಲಸಿನ ಹಣ್ಣು ಮಡಿಕೆ, ಬಳ್ಳಿ ಕೆಸುವಿನ ದೋಸೆ, ಮಾವಿನ ಉಪ್ಪಿನಕಾಯಿ, ಪೂಂಬೆ ಪಲ್ಯ, ತಿಮರೆ ಚಟ್ನಿ, ಪೂಂಬೆ ಚಟ್ನಿ, ತಜಂಕ್ ಪೆಲ್ತರಿ ಪಲ್ಯ, ಮಂಜಲ್ದ ಇರೆತ ಗಟ್ಟಿ, ಅರಿ ಪೊಡಿ, ಮರಕೆರೆಂಗ್ ಗಾಂಧಾರಿ ಚಟ್ನಿ, ನೀರ್ ಕುಕ್ಕು, ಉಪ್ಪಡ್ಪಚ್ಚಿಲ್ ಗಸಿ, ಚೇವು ತೇಟ್ಲ, ಪೊರಿ ಬಜಿಲ್, ಬಾರೆದ ದಂಡ್ ಪಲ್ಯ. ತಜಂಕ್ ದೋಸೆ ನಾಡಿನ ಸಾಂಪ್ರದಾಯಿಕ ಸಿಹಿ-ಖಾರದ ತಿನಿಸುಗಳು ಎಲ್ಲರ ಮನಸ್ಸನ್ನು ಗೆದ್ದವು. ಈ ಮೂಲಕ ಮನೆಯಲ್ಲೇ ತಯಾರಿಸಿದ ಆಹಾರವೇ ಆರೋಗ್ಯದ ಮೂಲ ಎಂಬ ಸಂದೇಶ ವಿದ್ಯಾರ್ಥಿಗಳಿಗೆ ತಲುಪಿತು.

ವೇದಿಕೆಯಲ್ಲಿ ಸಂಸ್ಕೃತಿ – ಸಂಪ್ರದಾಯದ ಅರಿವು
ಕಾರ್ಯಕ್ರಮವನ್ನು ಸಂಸ್ಥೆಯ ಸಂಚಾಲಕರಾದ ಫಾ.ನೋಮಿಸ್ ಕುರಿಯಾಕೋಸ್  ದೀಪ ಬೆಳಗಿಸಿ ಉದ್ಘಾಟಿಸಿದರು. ಅವರು “ತುಳುನಾಡಿನ ಸಂಪ್ರದಾಯಗಳು ಶಾಶ್ವತವಾದವು. ಹಳೆಯ ಪದ್ಧತಿಗಳನ್ನು ಪುನಃ ಜೀವಂತಗೊಳಿಸುವುದರಿಂದ ವಿದ್ಯಾರ್ಥಿಗಳಿಗೆ ಸಮಾಜ-ಸಂಸ್ಕೃತಿ ಪರಿಚಯಿಸಲು ಸಾಧ್ಯ” ಎಂದರು.
ಮುಖ್ಯ ಅತಿಥಿಗಳಾಗಿ ಬಂದ ಕೊಕ್ಕಡ ಸರ್ಕಾರಿ ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲ ವಿಶ್ವನಾಥ ರೈ ಅವರು ಆಧುನಿಕ ಯುಗದಲ್ಲಿ ಸಂಪ್ರದಾಯಗಳು ಮಸುಕಾಗುತ್ತಿರುವುದರ ಬಗ್ಗೆ ವಿಷಾದ ವ್ಯಕ್ತಪಡಿಸಿ, “ಈ ರೀತಿಯ ಕಾರ್ಯಕ್ರಮಗಳು ವಿದ್ಯಾರ್ಥಿಗಳಿಗೆ ಆಚಾರ-ವಿಚಾರ, ಪಾರಂಪರ್ಯ ತಿಳಿಸುವ ಸೇತುವೆಯಾಗಿವೆ” ಎಂದು ಹೇಳಿದರು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಪ್ರಾಂಶುಪಾಲ ಏಲಿಯಾಸ್ ಎಂ.ಕೆ ವಹಿಸಿ ಶುಭ ಹಾರೈಸಿದರು. ವೇದಿಕೆಯಲ್ಲಿ ಎನ್‌ಎಸ್‌ಎಸ್ ಯೋಜನಾಧಿಕಾರಿ, ಉಪನ್ಯಾಸಕ ವಿಶ್ವನಾಥ ಶೆಟ್ಟಿ ಕೆ, ಸಂಯೋಜಕಿ ಉಪನ್ಯಾಸಕಿ ಗೀತಾ, ವಿದ್ಯಾರ್ಥಿ ನಾಯಕರಾದ ತನುಷ್ ಮತ್ತು ಅನುಷ್ ಉಪಸ್ಥಿತರಿದ್ದರು. ಉಪನ್ಯಾಸಕ ಕಿರಣ್ ಸ್ವಾಗತಿಸಿದರು, ವಿಶ್ವನಾಥ ಶೆಟ್ಟಿ.ಕೆ., ನಿರೂಪಣೆ ನಡೆಸಿ, ಉಪನ್ಯಾಸಕ ಮಧು.ಎ.ಜೆ., ವಂದನೆ ಸಲ್ಲಿಸಿದರು.

ಆಟಿಯ ಅರ್ಥ – ಬದುಕಿನ ಪಾಠ
“ಆಟಿದ ನೆಂಪುಡು ಸೋಣದ ಪೊಲಬು” ಕೇವಲ ಒಂದು ಆಹಾರ ಕೂಟವಲ್ಲ; ಅದು ಬದುಕಿನ ಪಾಠ. ಇರುವುದರಲ್ಲಿ ತೃಪ್ತಿಯಿಂದ ಬಾಳುವುದು, ಪ್ರಕೃತಿಯ ಸಂಪತ್ತನ್ನು ಗೌರವಿಸುವುದು, ಸಮುದಾಯದ ಒಗ್ಗಟ್ಟು ಬೆಳೆಸುವುದು – ಇವೆಲ್ಲವನ್ನು ಮಕ್ಕಳಿಗೂ, ಪೋಷಕರಿಗೂ ಕಲಿಸುವ ಪ್ರಯತ್ನ. ಹಳೆಯ ಸಂಪ್ರದಾಯಗಳು ಮರೆವಾಗದಂತೆ, ಮುಂದಿನ ಪೀಳಿಗೆಗೂ ಅದರ ಮಹತ್ವವನ್ನು ತಲುಪಿಸುವುದು ಈ ಕಾರ್ಯಕ್ರಮದ ಮುಖ್ಯ ಸಾಧನೆ.
-ಏಲಿಯಾಸ್ ಎಂ.ಕೆ., ಪ್ರಾಂಶುಪಾಲರು

ನೆಲ್ಯಾಡಿ ಸಂತ ಜಾರ್ಜ್ ಪಿ.ಯು. ಕಾಲೇಜಿನ ಎನ್‌ಎಸ್‌ಎಸ್ ಘಟಕ ಆಯೋಜಿಸಿದ “ಆಟಿದ ನೆಂಪುಡು ಸೋಣದ ಪೊಲಬು” ಕಾರ್ಯಕ್ರಮದಲ್ಲಿ ವಿದ್ಯಾರ್ಥಿಗಳು, ಶಿಕ್ಷಕರು ಕೈಜೋಡಿಸಿ 50ಕ್ಕೂ ಹೆಚ್ಚು ಆಟಿಯ ತಿಂಡಿಗಳನ್ನು ತಂದು ಹಂಚಿಕೊಂಡರು. ಹಳೆಯ ಸಂಪ್ರದಾಯ, ಆಟಿ ತಿಂಗಳ ಪಾಕವಿಧಾನಗಳ ಅರಿವು ಮೂಡಿಸಿ, ಶಾಲೆ-ಪೋಷಕರ ಬಾಂಧವ್ಯ ಗಟ್ಟಿಗೊಳಿಸಿದ ಈ ಕಾರ್ಯಕ್ರಮ ಸಂಸ್ಕೃತಿಯ ಮಧುರ ನೆನಪಾಗಿ ಉಳಿಯಿತು.
-ವಿಶ್ವನಾಥ ಶೆಟ್ಟಿ ಕೆ., ಎನ್‌ಎಸ್‌ಎಸ್ ಯೋಜನಾಧಿಕಾರಿ

  •  

Leave a Reply

You May Have Missed

error: Content is protected !!